ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಮಾಜಿ ಹಾಗೂ ಹಾಲಿ ಶಾಸಕರ ನಡುವಣ ವಾಗ್ಯುದ್ಧ ಮತ್ತಷ್ಟು ಜೋರಾಗಿದೆ. ತಾಕತ್ ಇದ್ದರೆ ಶಾಸಕ ಪ್ರದೀಪ್ ಈಶ್ವರ್ ಕಾಂಗ್ರೆಸ್ ಪಕ್ಷದಿಂದ ರಾಜೀನಾಮೆ ಕೊಟ್ಟು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲ್ಲಿ ಎಂದು ಮಾಜಿ ಆರೋಗ್ಯ ಸಚಿವ ಸುಧಾಕರ್ ಸವಾಲು ಹಾಕಿದ್ದಾರೆ. ನಾನು ಬಿಜೆಪಿ ಪಕ್ಷ ಬಿಟ್ಟು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಮಾಜಿ ಸಚಿವರ ಈ ಹೇಳಿಕೆಗೆ ಇದೀಗ ಶಾಸಕರ ಪ್ರದೀಪ್ ಈಶ್ವರ್ ತಿರುಗೇಟು ನೀಡಿದ್ದಾರೆ.
ಬಿಜೆಪಿ ಪಕ್ಷ ಸುಧಾಕರ್ ಅವರನ್ನು ಹೊರ ಹಾಕಿದೆಯಾ ಎಂದು ಪ್ರಶ್ನಿಸಿರುವ ಶಾಸಕ ಪ್ರದೀಪ್ ಈಶ್ವರ್, ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಅವರು ದ್ರೋಹ ಮಾಡಿದ್ದರು. ಸೋತ ಮೇಲೆ ಕಳೆದ ಎರಡು ತಿಂಗಳಿಂದ ಏನು ಮಾತಾನಾಡಿಲ್ಲ, ಹೀಗಾಗಿ ಅವರು ಮತ್ತೆ ಕಾಂಗ್ರೆಸ್ ಪಕ್ಷದ ಕದ ತಟ್ಟಲು ಬರುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಅವರನ್ನು ಸೇರಿಸಿಕೊಳ್ಳಲು ರೆಡಿ ಇಲ್ಲ. ಮುಂದಿನ ದಿನಗಳಲ್ಲಿ ಸುಧಾಕರ್ ಅವರಿಗೆ ಬಿಜೆಪಿ ಟಿಕೆಟ್ ಕೊಡುವುದು ಕೂಡ ಡೌಟ್. ಇನ್ನು ಕ್ಷೇತ್ರದಲ್ಲಿ ಸುಧಾಕರ್ ಬೆಂಬಲಿಗರು ತಗ್ಗಿ ಬಗ್ಗಿ ನಡೆಯದಿದ್ದರೆ, ನಾನು ಸುಮ್ಮನೆ ಇರಲ್ಲ ಎಂದು ವಾರ್ನ್ ಕೂಡಾ ಕೊಟ್ಟಿದ್ದಾರೆ.
ನಾನು ಸುಧಾಕರ್ ಬೆಂಬಲಿಗರಿಗೆ ಹೇಳುವುದು ಇಷ್ಟು, ಇದು ನಮ್ಮಿಬ್ಬರ ಜಗಳ ನೀವು ಮಧ್ಯ ಬರಬೇಡಿ, ಸುಮ್ಮನೆ ಈ ಜಗಳದಲ್ಲಿ ಮಧ್ಯ ಬಂದು ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಪ್ರದೀಪ್ ಈಶ್ವರ್ ಎಚ್ಚರಿಕೆ ಕೊಟ್ಟಿದ್ದಾರೆ.
ಬಿಜೆಪಿ ಮುಖಂಡ ಸಂತೋಷ್ ಅವರಿಗೆ ಶಾಸಕ ಪ್ರದೀಪ್ ಈಶ್ವರ್ ಅವರ ಬೆಂಬಲಿಗರು ಹಾಡಹಗಲೇ ಅವರ ಅಂಗಡಿ ಬಳಿ ಹೋಗಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಭಟನೆ ನಡೆಸಿದ್ದರು. ಇಂದು ಬೆಳಗ್ಗೆ ಡಾ ಕೆ ಸುಧಾಕರ್ ಅವರು ಎಸ್ಪಿ ಡಿ ಎಲ್ ಸಂತೋಷ್ ಅವರಿಗೆ ಈ ಬಗ್ಗೆ ದೂರು ನೀಡಿದ್ದರು. ಆ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ್ದ ಮಾಜಿ ಸಚಿವರು, ಶಾಸಕ ಪ್ರದೀಪ್ ಈಶ್ವರ್ ಅವರು ತಾಕತ್ತಿದ್ದರೆ ಕಾಂಗ್ರೆಸ್ ಪಕ್ಷದಿಂದ ಹೊರಬಂದು ಸ್ವತಂತ್ರ ಅಭ್ಯರ್ಥಿಯಾಗಿ ನನ್ನ ವಿರುದ್ಧ ಸ್ಪರ್ಧಿಸಲಿ. ಆಗ ಯಾರು ಗೆಲ್ಲುತ್ತಾರೆ ಎಂದು ನೋಡೋಣ ಎಂದು ಸವಾಲು ಹಾಕಿದ್ದರು.
ಅವರ ಈ ಸವಾಲಿಗೆ ಶಾಸಕ ಪ್ರದೀಪ್ ಈಶ್ವರ್ ಈ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ಧೈರ್ಯ ಇದ್ರೆ ಪ್ರದೀಪ್ ಈಶ್ವರ್ ರಾಜೀನಾಮೆ ಕೊಟ್ಟು ಸ್ವತಂತ್ರವಾಗಿ ನನ್ನೆದುರು ಚುನಾವಣೆಗೆ ನಿಲ್ಲಲಿ : ಕೆ ಸುಧಾಕರ್