ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದಲ್ಲಿ ಇಂದು ಸುರಿದ ಭಾರಿ ಮಳೆಗೆ ಅನೇಕ ಮನೆಗಳ ಮೇಲ್ಛಾವಣಿಗಳು ಕುಸಿದು ಅಪಾರ ಪ್ರಮಾಣದ ಆಸ್ತಿ ನಷ್ಟ ಉಂಟಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ನಗರದಲ್ಲಿ ಇಂದು ಮಳೆಯಾಗಿದ್ದು, ಚೇಳೂರು ರಸ್ತೆಯಲ್ಲಿರುವ ರೈಲ್ವೆ ಬ್ರಿಡ್ಜ್ ಕೆಳಭಾಗದಲ್ಲಿ ನೀರು ನಿಂತು ಸಂಚಾರ ನಡೆಸಲು ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಇನ್ನೂ ಕೆಲವು ಭಾಗಗಳಲ್ಲಿ ಸಿಡಿಲು ಬಡಿದು ಗೋಡೆ ಮುರಿದು ಬೈಕ್ ಮೇಲೆ ಬಿದ್ದ ಪರಿಣಾಮ ಬೈಕ್ ಜಖಂಗೊಂಡಿತ್ತು. ಕೆಲವು ಬೀದಿಗಳಲ್ಲಿ ಮರಗಳು ಧರೆಗುರುಳಿದ್ದ ದೃಶ್ಯಗಳು ಕಂಡು ಬಂದವು.
ಮಳೆಗೆ ಲಕ್ಷಾಂತರ ಮೌಲ್ಯದ ವಸ್ತುಗಳ ನಾಶವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.