ಬಾಗೇಪಲ್ಲಿ: ಕೊರೊನಾ ಸೋಂಕಿನ ಸಂಕಷ್ಟದಲ್ಲಿ ರಾಜ್ಯ ಹಾಗೂ ದೇಶದ ದುಡಿಯುವ ವರ್ಗಕ್ಕೆ ಸರ್ಕಾರಗಳು ಸಹಾಯ ಮಾಡಬೇಕಿತ್ತು. ಆದರೆ, ಸುಗ್ರೀವಾಜ್ಞೆ ಮೂಲಕ ಜನ ವಿರೋಧಿ ನೀತಿಗಳನ್ನು ಜಾರಿ ಮಾಡಲಾಗಿದೆ. ಇದು ಖಂಡನೀಯ ಎಂದು ಸಿಪಿಐ (ಎಂ) ಜಿಲ್ಲಾ ಸಮಿತಿ ಮುಖಂಡ ಎಂ.ಪಿ.ಮುನಿವೆಂಕಟಪ್ಪ ಹೇಳಿದರು.
![CPM protest against central and state anti people policy](https://etvbharatimages.akamaized.net/etvbharat/prod-images/8569325_321_8569325_1598455465792.png)
ಇಂದು ಗೂಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತೆ ನೀತಿ, ನಿಯಮಗಳನ್ನು ರೂಪಿಸಲಾಗಿದೆ. ಇದು ದುಡಿಯುವ ಹಾಗೂ ಯುವ ಸಮೂಹದ ಮೇಲೆ ಬರೆ ಎಳೆದಂತೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸಿಪಿಐ(ಎಂ) ಪುಣ್ಯಮಿ ಸಂಘದ ಮೂಲಕ ಹುಟ್ಟಿಕೊಂಡು, ಇಂದು ರಾಜ್ಯಾದ್ಯಂತ ಶೋಷಿತ, ಬಡ, ಕೂಲಿ ಕಾರ್ಮಿಕರು, ಯುವ ಜನತೆಯ ಹಾಗೂ ಮಹಿಳಾ ಪರವಾದ ಧ್ವನಿಯಾಗಿ, ನಿರಂತರ ಹೋರಾಟ ನಡೆಸಿದೆ ಎಂದು ತಿಳಿಸಿದರು.
ಪಕ್ಷದಿಂದ ಉಚ್ಛಾಟನೆಗೊಂಡ ಕೆಲವರು ಪಕ್ಷದ ವಿರುದ್ಧ ಅವಾಸ್ತವಿಕ ಅಂಶಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ದೂರಿದರು. ಸಿಪಿಐ(ಎಂ) ಪಕ್ಷಕ್ಕೆ ಮೊದಲ ಅಡಿಪಾಯದ ಹೆಗ್ಗುರುತು ಗೂಳೂರಾಗಿದೆ. ಹಾಗಾಗಿಯೇ ಅನ್ಯಾಯದ ಧ್ವನಿಯನ್ನು ಮೊಳಗಿಸಲಾಗುತ್ತಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರ್ಕಾರಿ ಆರೋಗ್ಯ ಕ್ಷೇತ್ರವನ್ನು ಸರಿಯಾದ ಕ್ರಮದಲ್ಲಿ ಕೊಂಡೊಯ್ಯುವಲ್ಲಿ ವಿಫಲವಾಗಿವೆ. ಸ್ವಾತಂತ್ರ್ಯ ಭಾರತದಲ್ಲಿ ಜನಸಂಖ್ಯೆಯಾಧಾರಿತ ಅನುಪಾತದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿದ್ದರೆ, ಇಂತಹ ಕೆಟ್ಟ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ವೈದ್ಯ ಅನಿಲ್ ಕುಮಾರ್ ಆವುಲಪ್ಪರವರು ಆರೋಪಿಸಿದರು.
ಸಿಪಿಐ(ಎಂ) ಪಕ್ಷವು ಜನರ ಪಕ್ಷವಾಗಿದ್ದು, ಯಾವ ನಾಯಕ ಅಥವಾ ವ್ಯಕ್ತಿಯದ್ದಲ್ಲ. ಸಾಮಾನ್ಯ ಜನರ ಧ್ವನಿ. ಈ ಪಕ್ಷವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ಸಿಪಿಐಎಂ ಪಕ್ಷ ಅಳಿಸಿ ಹೋಗಬೇಕೆಂದರೇ ಪ್ರಪಂಚದಲ್ಲಿನ ಅಸಮಾನತೆ, ಅನ್ಯಾಯಗಳು ಸಂಪೂರ್ಣ ನಾಶವಾದಾಗ ಪಕ್ಷವು ತಾನಾಗಿಯೇ ಹೊರಟು ಹೋಗುತ್ತದೆ ಎಂದರು.
ಬಿಜೆಪಿ ಸರ್ಕಾರ ಬಡಜನತೆಗೆ ಅಂದರೆ, ಆದಾಯ ತೆರಿಗೆ ವ್ಯಾಪ್ತಿಗೆ ಬರುದ ಪ್ರತಿ ಕುಟುಂಬಕ್ಕೂ 6 ತಿಂಗಳವರೆಗೆ 7500 ರೂಪಾಯಿ ನಗದನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು. ನರೇಗಾ ಕೆಲಸದ ದಿನಗಳನ್ನು 200ಕ್ಕೆ ಏರಿಸಬೇಕು ಎಂದು ಹೇಳಿದರು.
ಕೊರೊನಾ ಸಂದರ್ಭ ಉಪಯೋಗಿಸಿಕೊಂಡು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ, ವಿದ್ಯುತ್ ವಿಧೇಯಕಗಳಿಗೆ ತಂದಿರುವ ತಿದ್ದುಪಡಿಗಳನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಲಾಯಿತು.