ಚಿಕ್ಕಬಳ್ಳಾಪುರ: ಕೋಲಾರ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿರುವ ಚಿಂತಾಮಣಿ ಹಾಗೂ ಶಿಡ್ಲಘಟ್ಟ ಅಭ್ಯರ್ಥಿಗಳ ಪಾಲಿಗೆ ಬಹಳ ಮುಖ್ಯವಾದ ಕ್ಷೇತ್ರಗಳಾಗಿವೆ. ವಿಧಾನಸಭಾ ಕ್ಷೇತ್ರಗಳಾಗಿರುವ ಈ ಎರಡೂ ಕಡೆ ಮತಭೇಟೆ ನಡೆಸುವಾಗ ಕೊಟ್ಟ ಸಮಯಕ್ಕಿಂತ ಹೆಚ್ಚಿನ ಸಮಯ ಪ್ರಚಾರಸಭೆ ನಡೆಸುತ್ತಿರುವ ಅಭ್ಯರ್ಥಿಗಳು ನೀತಿಸಂಹಿತೆ ಉಲ್ಲಂಘನೆ ಮಾಡುತ್ತಿದ್ದಾರೆ.
ಮೈತ್ರಿ ಪಕ್ಷದ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಚಿಂತಾಮಣಿ ತಾಲೂಕಿನ ಹಲವೆಡೆ ಬಿರುಸಿನ ಪ್ರಚಾರ ಸಭೆ ನಡೆಸುತ್ತಿದ್ದಾರೆ. ಇಂದು ಚಿಂತಾಮಣಿಯಲ್ಲಿ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯುದ್ದಕ್ಕೂ ಅವರು ಪ್ರಧಾನಿ ಮೋದಿಯವರ ಆಡಳಿತ ಹಾಗೂ ಕಾರ್ಯವೈಖರಿಯ ಬಗ್ಗೆ ಟೀಕಾ ಪ್ರಹಾರ ನಡೆಸಿದರು. ಆದರೆ ಸಭೆ ನಡೆಸಲು ಮಧ್ಯಾಹ್ನ1 ಗಂಟೆಯವರೆಗೂ ಅನುಮತಿ ನೀಡಲಾಗಿತ್ತು. ಆದರೆ 2 ಗಂಟೆಯಾದ್ರೂ ಸಭೆ ಮುಗಿಸದೆ ಹಾಗೆಯೇ ಮುಂದುವರೆಸುವ ಮೂಲಕ ಅವರು ಚುನಾವಣೆ ನೀತಿಸಂಹಿತೆ ಉಲ್ಲಂಘಿಸಿದರು. ಈ ವಿಷಯ ಇದೀಗ ಪ್ರತಿಪಕ್ಷವಾದ ಬಿಜೆಪಿ ನಾಯಕರ ಬಾಯಿಗೆ ಮೇವು ಸಿಕ್ಕಂತಾಗಿದೆ.
ಈ ಚುನಾವಣಾ ಸಭೆಯಲ್ಲಿ ಕೆ.ಹೆಚ್.ಮುನಿಯಪ್ಪ, ಸಿ.ಎಂ ಹಿಬ್ರಾಹಿಂ, ಸ್ಥಳೀಯ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಮತದಾರರು ಭಾಗವಹಿಸಿದ್ದರು.