ಚಿಕ್ಕಬಳ್ಳಾಪುರ: ವಿಧಾನಸಭೆಯಲ್ಲಿ ಸಾಕಷ್ಟು ಚರ್ಚೆಗಳಿಂದ ಬೇಸತ್ತಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳಕ್ಕೆ ಭೇಟಿ ಕೊಟ್ಟು ತಮ್ಮ ಮದುವೆಯ ದಿನಗಳನ್ನು ಮೆಲುಕು ಹಾಕಿದರು.
ರಾಜಕೀಯ ಏರಿಳಿತಗಳಿಂದ ಇಷ್ಟು ದಿನ ಬಹಳಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಕಾರಣ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಈಗ ಸ್ವಲ್ಪ ನಿರಾಳನಾಗಿರುವೆ ಎಂದು ತಿಳಿಸಿದರು. ಇದೇ ವೇಳೆ ಕಳೆದ 42 ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ನಮ್ಮ ಮದುವೆ ನಡೆಯಿತು. ಆಗ ಇಲ್ಲಿ ಯಾವ ಮೂಲಭೂತ ಸೌಕರ್ಯಗಳು ಇರಲಿಲ್ಲ. ದೇವರಾಜಅರಸ್ ಆಗಿನ ಮುಖ್ಯಮಂತ್ರಿಗಳಾಗಿದ್ದರು ನಾನು ಯುವಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದೆ ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡರು.
ಮಾಜಿ ಸಿಎಂ ಸಿದ್ದರಾಮಯ್ಯ ಬಹಳ ಪ್ರಭಾವಿ ನಾಯಕರು ದೇವರಾಜಅರಸರ ನಂತರ ಐದು ವರ್ಷ ಅಧಿಕಾರ ನಿರ್ವಹಿಸಿದ ಪ್ರಭಾವಿ ರಾಜಕಾರಣಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಈಗ ಅವರ ನೇತೃತ್ವದಲ್ಲಿ ಪಕ್ಷ ಕಟ್ಟುವ ಕೆಲಸವನ್ನು ಶುರುಮಾಡುತ್ತೇವೆಂದು ತಿಳಿಸಿದರು.
ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಉಪ ಚುನಾವಣೆಯ ಬಗ್ಗೆ ಚರ್ಚೆ ಮಾಡೋಣ ಈಗ ಅದು ಅಪ್ರಸ್ತುತ. ಸದ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರೋತ್ಸಾಹ ಧೈರ್ಯವನ್ನು ತುಂಬಬೇಕಾಗಿದೆ ಎಂದು ತಿಳಿಸಿದರು.