ಕೊಳ್ಳೇಗಾಲ: ತಾಲೂಕಿನ ಇಕ್ಕಡಹಳ್ಳಿ ಗ್ರಾಮದ ಒಂದೇ ಕುಟುಂಬದ ಇಬ್ಬರು ಸದಸ್ಯರು ತಿಂಗಳು ತುಂಬುವಷ್ಟರಲ್ಲಿಯೇ ಕೊರೊನಾಕ್ಕೆ ಬಲಿಯಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಇಲ್ಕಡಹಳ್ಳಿ ಗ್ರಾಮದಲ್ಲಿ ಇಂಥ ಮನಕಲಕುವ ಘಟನೆ ನಡೆದಿದೆ. ಚಿಕ್ಕಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು (32) 15 ದಿನಗಳ ಹಿಂದಷ್ಟೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಹೀಗಾಗಿ ಮನೆಯಲ್ಲಿ ನೋವಿನ ಸೂತಕ ವ್ಯಾಪಿಸಿತ್ತು. ಅದಾದ ನಂತರ ಅವರ ದೊಡ್ಡಪ್ಪ ನಿವೃತ್ತ ಪ್ರಾಂಶುಪಾಲರು ಹಾಗೂ ಹನೂರಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಪಯ್ಯ(70)ಇದೀಗ ಕೊರೊನಾದಿಂದ ಅಸುನೀಗಿದ್ದಾರೆ. ಮನೆಯಲ್ಲಿ ಒಬ್ಬರಾದ ಮೇಲೊಬ್ಬರ ಸಾವಿನಿಂದ ಸ್ಮಶಾನ ಮೌನ ಆವರಿಸಿದೆ.
ಮೃತರ ಅಂತ್ಯಕ್ರಿಯೆಯನ್ನು ಸ್ವಗ್ರಾಮವಾದ ಇಕ್ಕಡಹಳ್ಳಿಯ ಜಮೀನೊಂದರಲ್ಲಿ ಕೋವಿಡ್ ನಿಯಮಾವಳಿಯಲ್ಲಿ ನೆರವೇರಿಸಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್, ಶಾಸಕ ಆರ್.ನರೇಂದ್ರ ಜಯಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೈರಾಜ್ ಮೃತರಿಗೆ ಸಂತಾಪ ಸೂಚಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ಅತಿ ವೇಗದಲ್ಲಿ ಹರಡಲಾರಂಭಿಸಿದೆ. ಆದರೆ ಜನರು ಭಯ ಪಡಬೇಕಾಗಿಲ್ಲ, ಸೂಕ್ತ ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆ ಪಡೆದು ಸೋಂಕಿನಿಂದ ದೂರಾಗಬಹುದು ಎಂದು ಸರ್ಕಾರ ಹಾಗೂ ವೈದ್ಯಕೀಯ ಇಲಾಖೆ ಸೂಚಿಸುತ್ತಿದೆ.