ಚಾಮರಾಜನಗರ: ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಸೋಲಿಗರು ಮತ್ತು ಆದಿ ಕರ್ನಾಟಕ ಜನಾಂಗದ 20 ಮಂದಿಗೆ ವ್ಯವಸಾಯಕ್ಕೆ ನೀಡಲಾಗಿದ್ದ ಜಮೀನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಆಕ್ರಮಿಸಿ ಆನೆ ಕಂದಕ ತೋಡುತ್ತಿದ್ದಾರೆಂದು ರೈತರು ಆರೋಪಿಸಿದ್ದಾರೆ.
ಚಾಮರಾಜನಗರ ತಾಲೂಕು ಚಂದಕವಾಡಿ ಹೋಬಳಿ ಹೊನ್ನೇಗೌಡನಹಳ್ಳಿ ಗ್ರಾಮವು ಗಡಿ ಗ್ರಾಮವಾಗಿದ್ದು ರೆವಿನ್ಯೂ ಗ್ರಾಮವಾಗಿದೆ. ಇಲ್ಲಿ 70 ವರ್ಷಗಳಿಂದ ಸುಮಾರು 60 ಕುಟುಂಬಗಳು ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ಅಲ್ಲದೇ 2001-02ನೇ ಸಾಲಿನಲ್ಲಿ ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ 20 ಜನ ಸೋಲಿಗರು ಮತ್ತು ಆದಿ ಕರ್ನಾಟಕ ಜನಾಂಗದವರಿಗೆ ತಲಾ 2 ಎಕರೆಯಂತೆ ಖರೀದಿಸಿ ವ್ಯವಸಾಯ ಮಾಡಲು ಅನುಕೂಲ ಕಲ್ಪಿಸಿಕೊಟ್ಟಿದೆ.
ಹೀಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು 8 ತಿಂಗಳ ಹಿಂದೆ ರೈತರ ಜಮೀನುಗಳಿಗೆ ಯಾವುದೇ ನೋಟಿಸ್ ನೀಡದೇ ಗಡಿರೇಖೆ ಗುರುತಿಸುವ ಕಲ್ಲು ನೆಟ್ಟು ಈಗ ರೈತರ ಗಮನಕ್ಕೆ ಬಾರದೆ ಜಂಟಿ ಸರ್ವೇ ಆಗಿದೆ ಎಂದು ಸುಳ್ಳು ನೆಪ ಹೇಳಿ ರೈತರನ್ನು ವಂಚಿಸಿ, ಕೋವಿಡ್ ಲಾಕ್ಡೌನ್ ಸಂದರ್ಭವನ್ನು ಬಳಸಿಕೊಂಡು ರೈತರ ಸುಮಾರು100 ಎಕರೆ ಜಮೀನಿಗೆ 5 ಹಿಟಾಚಿಗಳನ್ನು ಬಳಸಿಕೊಂಡು ವ್ಯವಸಾಯ ಮಾಡಿರುವ ಜಮೀನಿನಲ್ಲಿ ಆನೆ ಕಂದಕ ತೊಡುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಈ ಕುರಿತು ತಹಸೀಲ್ದಾರ್ ಅವರಿಗೆ ವಿಷಯ ತಿಳಿದ ನಂತರ ತುರ್ತಾಗಿ ಸ್ಥಳಕ್ಕೆ ಗ್ರಾಮ ಲೆಕ್ಕಿಗರನ್ನು ಕಳುಹಿಸಿ ಲಾಕ್ ಡೌನ್ ಮುಗಿಯುವವರೆಗೆ ಸಮಯಾವಕಾಶ ನೀಡಿ ಎಂದು ಹೇಳಿದರೂ ಕ್ಯಾರೆ ಎನ್ನದೇ ವಲಯ ಅರಣ್ಯಾಧಿಕಾರಿಗಳು ಆನೆ ಕಂದಕ ತೋಡುತ್ತಿದ್ದು, ಡಿಸಿ ಮಧ್ಯ ಪ್ರವೇಶಿಸಿ ರೈತರ ಸಮಸ್ಯೆ ಬಗೆಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.