ಚಾಮರಾಜನಗರ: ಹಗಲು ಓದಿಕೊಂಡು ರಾತ್ರಿ ವೇಳೆ ರಸ್ತೆ ಮೇಲೆ ಚಿತ್ರಕಲೆ ಬಿಡಿಸಿ ಜನರಿಗೆ ಕೊರೊನಾ ಜಾಗೃತಿ ಮೂಡಿಸಲು ಎಸ್ಎಸ್ಎಲ್ಸಿ ವಿದ್ಯಾರ್ಥಿಯೊಬ್ಬ ಮುಂದಾಗಿದ್ದಾನೆ. ಈತನ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹನೂರು ತಾಲೂಕಿನ ರಾಮಾಪುರದ ಪಾನಿಪುರಿ ವ್ಯಾಪಾರಿ ರಾಮಸ್ವಾಮಿ-ಇರುಸಾಯಮ್ಮ ದಂಪತಿ ಪುತ್ರ ವಿಜ್ಞೇಶ್ ಎಂಬ SSLC ವಿದ್ಯಾರ್ಥಿ ಪರೀಕ್ಷೆಯ ಓದಿನೊಂದಿಗೆ ಚಿತ್ರಕಲೆ ಮೂಲಕ ಕೊರೊನಾ ಜಾಗೃತಿ ಮೂಡಿಸಲು ಮುಂದಾಗಿದ್ದಾನೆ. ರಾಮಾಪುರ ಮುಖ್ಯರಸ್ತೆಯಲ್ಲಿ ಸಂಜೆಯಿಂದ ಮಧ್ಯರಾತ್ರಿ 2 ರವರೆಗೂ ಮನೆಯಲ್ಲೇ ಇರಿ - ಸುರಕ್ಷಿತವಾಗಿರಿ ಎಂದು ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾನೆ.
5ನೇ ತರಗತಿಯಿಂದ ಚಿತ್ರಕಲೆಯಲ್ಲಿ ಒಲವು ಬೆಳೆಸಿಕೊಂಡ ವಿಜ್ಞೇಶ್ ಸತತ ಪ್ರಯತ್ನದಿಂದಾಗಿ ಜಲವರ್ಣ, ತೈಲವರ್ಣ, ಭಾವಚಿತ್ರ, ಪೆನ್ಸಿಲ್, ಪೆನ್ ಸ್ಕೆಚ್ ಗಳಲ್ಲಿ ಪ್ರಾವೀಣ್ಯತೆ ಸಾಧಿಸಿದ್ದಾನೆ. ಹೀಗಾಗಿ ಚಿತ್ರಕಲೆ ಮೂಲಕವೇ ಕೊರೊನಾ ಜಾಗೃತಿ ಮೂಡಿಸುತ್ತೇನೆ. ತನಗೆ ಯಾರಾದರೂ ಪೇಂಟ್ ತೆಗೆದುಕೊಟ್ಟರೇ ಗೋಡೆ, ರಸ್ತೆಯ ಮೇಲೆ ಮಾಸ್ಕ್, ಸಾಮಾಜಿಕ ಅಂತರ ಕುರಿತು ಅರಿವು ಮೂಡಿಸುವೆ ಎಂದು ಇಂಗಿತ ವ್ಯಕ್ತಪಡಿಸುತ್ತಾನೆ.
![Ramapur SSLC Student corona social work, ರಾಮಾಪುರ SSLC ವಿದ್ಯಾರ್ಥಿ ಕೊರೊನಾ ಚಿತ್ರಕಲೆ](https://etvbharatimages.akamaized.net/etvbharat/prod-images/kn-cnr-03-sslc-student-av-7202614_27052020160205_2705f_1590575525_873.jpg)
![Ramapur SSLC Student corona social work, ರಾಮಾಪುರ SSLC ವಿದ್ಯಾರ್ಥಿ ಕೊರೊನಾ ಚಿತ್ರಕಲೆ](https://etvbharatimages.akamaized.net/etvbharat/prod-images/kn-cnr-03-sslc-student-av-7202614_27052020160205_2705f_1590575525_635.jpg)
SSLC ಪರೀಕ್ಷೆ ವೇಳೆಯಾದ್ದರಿಂದ ಹಗಲಿನ ವೇಳೆ ಓದಿಕೊಂಡು ರಾತ್ರಿ ತಡರಾತ್ರಿವರೆಗೂ ರಸ್ತೆಯ ಮೇಲೆ ಚಿತ್ರ ಬಿಡಿಸಿ ಎಲ್ಲರ ಹುಬ್ಬೇರಿಸಿದ್ದಾನೆ. ಪರೀಕ್ಷೆ ವೇಳೆಯಲ್ಲೂ ಕೊರೊನಾ ಕುರಿತು ಜಾಗೃತಿ ಮೂಡಿಸಲು ಮುಂದಾಗಿರುವ ವಿಜ್ಞೇಶನನ್ನು ಪ್ರೋತ್ಸಾಹಿಸಿ ಆತನ ಕಲೆ ಬೆಳೆಸುವ ಜೊತೆಗೆ ಚಿತ್ರಕಲೆ ಮೂಲಕ ಜಾಗೃತಿಗೆ ಜಿಲ್ಲಾಡಳಿತ ಮುಂದಾಗಬೇಕಿದೆ.