ಚಾಮರಾಜನಗರ: ಹುಡುಗಿಯೊಬ್ಬಳು ತನ್ನ ಪ್ರೀತಿಯನ್ನು ಒಪ್ಪದಿದ್ದಕ್ಕೆ ಕೊರೊನಾ ಸೋಂಕು ತಗುಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಯುವಕನೋರ್ವನನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ.
ನಂಜನಗೂಡಿನ ನೀಲಕಂಠನಗರದ ಮಹೇಂದ್ರ (ಹೆಸರು ಬದಲಿಸಲಾಗಿದೆ) ಎಂಬ ವಿದ್ಯಾರ್ಥಿ ಬಂಧಿತ ಆರೋಪಿ. ಪ್ರೀತಿಸಿದ ಹುಡುಗಿ ತನ್ನ ಪ್ರೀತಿಯನ್ನು ಒಪ್ಪದಿದ್ದಕ್ಕೆ ಆಕೆಗೆ ಕೊರೊನಾ ಸೋಂಕು ತಗುಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ, ಜನರಲ್ಲಿ ಆತಂಕ ಸೃಷ್ಟಿಸಿದ್ದರಿಂದ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಇನ್ನು, ವೈರಲ್ ಮೆಸೇಜನ್ನು ಹಲವಾರು ಗುಂಪುಗಳಿಗೆ ಫಾರ್ವರ್ಡ್ ಮಾಡಿದ ಸಂತೇಮರಹಳ್ಳಿ ಸಮೀಪದ ಕಾವುದವಾಡಿ ಗ್ರಾಮದ ಯುವಕನನ್ನೂ, ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ನಂಜನಗೂಡಿನ ಯುವತಿ ಹಾಗೂ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಗ್ರಾಮದ ಯುವಕನೋರ್ವನಿಗೆ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ಈ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿ ಬಿಟ್ಟು ಆತಂಕ ಸೃಷ್ಟಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಚಾಮರಾಜನಗರ ಡಿಸಿ ಕ್ರಮಕ್ಕೆ ಅದೇಶಿಸಿದ್ದರು. ಚಾಮರಾಜನಗರ ಸಿಪಿಐ ನಾಗೇಗೌಡ ಅವರು ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.