ಚಾಮರಾಜನಗರ: ಹಿಂದೂಪರ ಸಂಘಟನೆಗಳು ಪ್ರತಿಷ್ಠಾಪಿಸುವ 'ದೊಡ್ಡ ಗಣಪತಿ' ನಿಮಜ್ಜನ ಕಾರ್ಯಕ್ರಮದಲ್ಲಿ ಮೆರವಣಿಗೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನೇ ಗಣಪತಿ ಮಂಡಲಿ ಮುಂದೂಡಿದೆ.
ಚಾಮರಾಜನಗರದ ರಥದ ಬೀದಿಯಲ್ಲಿ ಕೂರಿಸಿರುವ 'ಭೂರಕ್ಷ ಗಣಪತಿಯನ್ನು' ನಗರಾದ್ಯಂತ ಮೆರವಣಿಗೆ ಮಾಡಿ ಮನೆಗೊಬ್ಬರು ಪೂಜೆ ಸಲ್ಲಿಸಲು ಜಿಲ್ಲಾಡಳಿತ ಅವಕಾಶ ನೀಡದ ಹಿನ್ನೆಲೆಯಲ್ಲಿ ಸೋಮವಾರ ನಡೆಯಬೇಕಿದ್ದ ನಿಮಜ್ಜನ ಕಾರ್ಯಕ್ರಮವನ್ನು ದಿಢೀರ್ ಮುಂದೂಡಲಾಗಿದೆ. ಈ ಮೂಲಕ ಚಾಮರಾಜನಗರ ಡಿಸಿ ವರ್ಸಸ್ ಗಣಪತಿ ಮಂಡಲಿ ಎಂಬ ವಾತಾವರಣ ನಿರ್ಮಾಣವಾಗಿದೆ.
ಈ ಹಿಂದೆ ನಡೆಯುತ್ತಿದ್ದಂತೆ ಜಾನಪದ ಕಲಾತಂಡಗಳು, ವಾದ್ಯವೃಂದ, ಸಾಂಸ್ಕೃತಿಕ ಕಲಾವಿದರ ಜೊತೆ ಅದ್ಧೂರಿ ಮೆರವಣಿಗೆ ಮಾಡುವುದಿಲ್ಲ. ಕೇವಲ ಮಂಗಳವಾದ್ಯಗಳ ಮೂಲಕ ಮೆರವಣಿಗೆ ನಡೆಸಿ ಮನೆಗೊಬ್ಬರು ಪೂಜೆ ಸಲ್ಲಿಸಲು ಅವಕಾಶ ಕೊಡುವಂತೆ ಡಿಸಿ ಬಳಿ ಕೇಳಿದ್ದೆವು. ಮೊದಲೆಲ್ಲಾ ಅವರು ಒಪ್ಪಿ ಈಗ ದಿಢೀರ್ ಆಗಿ ಅವಕಾಶ ಇಲ್ಲ ಎನ್ನುತ್ತಿದ್ದಾರೆ. ಮೆರವಣಿಗೆಗೆ ಅವಕಾಶ ಕೊಡುವ ತನಕವೂ ನಾವು ನಿಮಜ್ಜನ ಮಾಡುವುದಿಲ್ಲ ಎಂದು ವಿದ್ಯಾ ಗಣಪತಿ ಮಂಡಲಿ ಅಧ್ಯಕ್ಷ ಚಿಕ್ಕರಾಜು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಈ ಗಣಪತಿ ಮೆರವಣಿಗೆ ವಿಚಾರ ಸಂಸತ್ತಲ್ಲೂ ದಿ. ಅಟಲ್ ಬಿಹಾರಿ ವಾಜಪೇಯಿ ಮಾತನಾಡಿ ಗಮನ ಸೆಳೆದಿದ್ದರು. ಮೆರವಣಿಗೆ ಹೊತ್ತಿನಲ್ಲಿ ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಮತ್ತು ಮೊದಲ ಪೂಜೆ ಪೊಲೀಸ್ ವರಿಷ್ಠಾಧಿಕಾರಿ ಸಲ್ಲಿಸುವುದರಿಂದ ಪೊಲೀಸ್ ಗಣಪ ಎಂತಲೂ ಕರೆಯಲಾಗುತ್ತದೆ. ಸದ್ಯ ಈಗ ಜಿಲ್ಲಾಡಳಿತ ಗಣಪತಿ ಮೆರವಣಿಗೆಗೆ ಅವಕಾಶ ಕೊಡುವುದೋ? ಇಲ್ಲವೋ? ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಕೋವಿಡ್ನಿಂದ ಮೃತರಾದ ಕುಟುಂಬದಿಂದ ಪರಿಹಾರ ಕೋರಿ ಸಾವಿರಾರು ಅರ್ಜಿ; ಯಾರೊಬ್ಬರಿಗೂ ಕೈಸೇರದ ಪರಿಹಾರ