ಚಾಮರಾಜನಗರ : ಶಾಸಕರ ಆಪ್ತ ಸಹಾಯಕ ಎಂದು ಹೇಳಿಕೊಂಡು ಮತ್ತೋರ್ವ ಶಾಸಕರಿಗೆ ವಂಚಿಸಿ ಹಣ ಪೀಕಿದ್ದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಮಳಲವಾಡಿ ಗ್ರಾಮದ ಸಚಿನ್ ಗೌಡ ಬಂಧಿತ ಆರೋಪಿ. ಕಳೆದ ಜುಲೈ 2ರಂದು ರೂಪಾಲಿ ನಾಯ್ಕ್ ಬಳಿ ತಾನು ಶಾಸಕ ಮಹೇಶ್ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡ ಸಚಿನ್, ಜುಲೈ 4ರಂದು ಶಾಸಕರಿಗೆ ತುರ್ತು ಹಣ ಬೇಕಿದೆ ಎಂದು ಹೇಳಿ ಗೂಗಲ್ ಪೇ ಮೂಲಕ 50 ಸಾವಿರ ರೂ. ಪಡೆದಿದ್ದಾನೆ ಎನ್ನಲಾಗಿದೆ.
ಇದಾದ ಕೆಲ ದಿನಗಳ ನಂತರ ಬೆಂಗಳೂರಿನಲ್ಲಿ ಶಾಸಕ ಎನ್.ಮಹೇಶ್ ಮತ್ತು ಶಾಸಕಿ ರೂಪಾಲಿ ನಾಯ್ಕ ಮುಖಾಮುಖಿ ಭೇಟಿಯಾಗಿದ್ದ ವೇಳೆ ಹಣದ ವಿಚಾರ ತಿಳಿದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಬಳಿಕ ಸಚಿನ್ಗೌಡನ ಫೋನ್ ನಂಬರ್ ಕೊಟ್ಟು ಕೊಳ್ಳೇಗಾಲ ಠಾಣೆಗೆ ಶಾಸಕ ಮಹೇಶ್ ಪಿಎ ಮಹಾದೇವಸ್ವಾಮಿ ದೂರು ಕೊಟ್ಟಿದ್ದಾರೆ. ದೂರು ಪಡೆದಿದ್ದ ಪೊಲೀಸರು, ಇಂದು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.