ಚಾಮರಾಜನಗರ : ಜಾನಪದ ತವರೂರಾದ ಚಾಮರಾಜನಗರದಲ್ಲಿ ಅಗಲಿದ ನಟ ಪುನೀತ್ ರಾಜ್ಕುಮಾರ್ ಅವರ ಕುರಿತಂತೆ 10ಕ್ಕೂ ಹೆಚ್ಚು ಹಾಡುಗಳು ಹುಟ್ಟಿಕೊಂಡಿವೆ. ಹಿರಿಯರ ಬಾಯಲ್ಲಿ ಅಪ್ಪು ನೆನಪಿನ ಪದಗಳು ಅನುರಣಿಸುತ್ತಿವೆ.
ಪುನೀತ್ ರಾಜಕುಮಾರ್ ಜಾನಪದ ಹಾಡು : ಸೋಬಾನೆ ಕಲಾವಿದರು, ಜಾನಪದ ಹಾಡುಗಾರರು ಪುನೀತ್ ರಾಜ್ಕುಮಾರ್ ಕುರಿತಂತೆ ಪದಗಳನ್ನು ಕಟ್ಟಿ ಹಾಡುತ್ತಿದ್ದಾರೆ. ಕಾರ್ಯಕ್ರಮಗಳಲ್ಲಿ ತಮ್ಮ ಹಾಡುಗಳೊಟ್ಟಿಗೆ ಅಪ್ಪು ಹಾಡನ್ನು ಹಾಡುತ್ತಿದ್ದಾರೆ. ಜನಪ್ರಿಯ ಗೀತೆಗಳಲ್ಲಿ ಒಂದಾದ 'ಹೇಗೆ ಮರೆಯಲಿ, ಮಾರೈಸಿ ಮಣ್ಣಿನ ಒಳಗೆ' ಹಾಡಿಗೆ ಪುನೀತ್ ಹೆಸರನ್ನು ಸೇರಿಸಿ, ಅವರು ಮಾಡಿದ ಸಾಧನೆಗಳನ್ನು ಕೊಂಡಾಡುತ್ತಿದ್ದಾರೆ.
Puneeth rajkumar folk songs : ಇದರೊಟ್ಟಿಗೆ ಸೋಬಾನೆ ಪದಗಳಲ್ಲಿ ಪುನೀತ್ ಕುರಿತ ಹಾಡು ಹುಟ್ಟಿಕೊಂಡಿವೆ. ಶಿವನಿಗೆ ಅಪ್ಪುನನ್ನು ಹೋಲಿಸಿ ಹಾಡಲಾಗುತ್ತಿದೆ. ಶನೀಶ್ವರ, ಶಿವನಂತೆ ಪುನೀತ್ ರಾಜ್ಕುಮಾರ್ ಅವರನ್ನು ಜಾನಪದರು ದೇವರನ್ನಾಗಿಸಿ ಅಭಿಮಾನ ಮೆರೆಯುತ್ತಿದ್ದಾರೆ.
'ಲಕ್ಷಾಂತರ ಮಂದಿ ಅವರನ್ನು ಕಾಣಲು ಹಾತೊರೆದಿದ್ದು, ಬ್ರಹ್ಮಲೋಕದಲ್ಲಿ ಸ್ಥಾನ ತುಂಬಲು ಯಾರೂ ಇಲ್ಲದಿದ್ದರಿಂದ ಅಪ್ಪುನನ್ನು ದೇವರು ಕರೆಸಿಕೊಂಡರು' ಎಂದು ಪದ ಕಟ್ಟಿ ಜಿಲ್ಲೆಯ ಹಲವಾರು ಕಲಾವಿದರು ಹಾಡುತ್ತಿದ್ದಾರೆ ಎಂದು ಯಳಂದೂರು ತಾಲೂಕಿನ ಯರಿಯೂರು ಗ್ರಾಮದ ಆಕಾಶವಾಣಿ ಕಲಾವಿದೆ ಲಕ್ಷ್ಮಮ್ಮ ಹೇಳುತ್ತಾರೆ.
ತಂದೆಯಂತೆ ಮಗನೂ ಕೂಡ ಸರಳಾತಿ ಸರಳ, ಜನರನ್ನು ಮಾತನಾಡಿಸುತ್ತಿದ್ದರು. ಅವರ ಕುರಿತ ಪದ ಕಟ್ಟಿ ಹಾಡಬೇಕೆಂದರೆ ಕರುಳು ಹಿಂಡುತ್ತದೆ. ಸುವರ್ಣಾವತಿ ಜಲಾಶಯಕ್ಕೆ ಬಂದಾಗ ನಮ್ಮನ್ನೆಲ್ಲಾ ಮಾತನಾಡಿಸುತ್ತಿದ್ದರು ಎಂದು ಕಣ್ಣೀರಿಡುತ್ತಾರೆ ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಜಾನಪದ ಕಲಾವಿದ ಆನಂದ್. ಪುನೀತ್ ರಾಜಕುಮಾರ್ ಅವರು ಅಗಲಿ ಒಂದು ತಿಂಗಳು ಮೇಲಾದರೂ ಜನಪದರ ಬಾಯಲ್ಲಿ ಅಪ್ಪು ನಿತ್ಯ ನಲಿಯುತ್ತಿದ್ದಾರೆ. ಈಗಲೂ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.