ಚಾಮರಾಜನಗರ : ವೈವಿಧ್ಯಮಯ ವನ್ಯ ಸಂಪತ್ತು, ಜೀವ ಸಂಕುಲಕ್ಕೆ ಆಶ್ರಯತಾಣವಾಗಿರುವ ಬಿಳಿಗಿರಿರಂಗನಾಥ ದೇವಸ್ಥಾನ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲಿನ 240 ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಕಳೆದ 19 ರಂದು ಅಧಿಸೂಚನೆ ಪ್ರಕಟಿಸಿದೆ.
ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು ತಾಲೂಕಿನ ಒಟ್ಟು 49 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ. 30ಕ್ಕೂ ಹೆಚ್ಚು ವಾಣಿಜ್ಯ ಚಟುವಟಿಕೆಗೆ ಈ ಮೂಲಕ ಬ್ರೇಕ್ ಬಿದ್ದಿದೆ. ಆದರೆ, ಪರಿಸರ ಸ್ನೇಹಿ ಚಟುವಟಿಕೆ ನಡೆಸಲು ಯಾವುದೇ ಆತಂಕ ಇಲ್ಲ.
ಪರಿಸರ ಸೂಕ್ಷ್ಮ ಗ್ರಾಮಗಳು: ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ, ಎಮ್ಮೆಹಟ್ಟಿ, ಹೊನ್ನಮೆಟ್ಟಿ, ಬೇಡಗುಳಿ, ಚಿಕ್ಕಮುದ್ದಹಳ್ಳಿ, ದೊಡ್ಡಮುದ್ದಹಳ್ಳಿ, ಪುಣಜನೂರು, ಹೊನ್ನೇಗೌಡನಹುಂಡಿ, ಹರದನಹಳ್ಳಿ ಜಿಲ್ಲಾ ಅರಣ್ಯ, ಹೊಂಡರಬಾಳು, ಜ್ಯೋತಿಗೌಡನಪುರ, ಮೇಲುಮಾಳ, ತಿಮ್ಮೇಗೌಡನಪಾಳ್ಯ, ಯರಂಗಬಳ್ಳಿ, ಗುಂಬಳ್ಳಿ, ವಡ್ಡಗೆರೆ, ಗೌಡಹಳ್ಳಿ, ಆಲ್ಕೆರೆ ಅಗ್ರಹಾರ, ಜೋಡಿಮೆಲ್ಲಹಳ್ಳಿ, ಮಲಾರಪಾಳ್ಯ, ದೇವರಹಳ್ಳಿ, ಶಿವಕಹಳ್ಳಿ, ಅರೆಪಾಳ್ಯ, ಸೂರಾಪುರ, ಜಕ್ಕಳ್ಳಿ, ತಿಮ್ಮರಾಜೀಪುರ, ಮಧುವನಹಳ್ಳಿ, ಹರುವನಪುರ, ಲಕ್ಷ್ಮಿಪುರ, ಹೊನ್ನ ಬೀರೆಬೆಟ್ಟ, ಚೆನ್ನಲಿಂಗನಹಳ್ಳಿ, ಚಿಕ್ಕ ಮಾಲಾಪುರ, ಸೀರಗೋಡು, ಲಕ್ಕನಹಳ್ಳಿ, ಮಾವತ್ತೂರು, ಗುಂಡಿಮಾಳ, ಅರಬಿಕೆರೆ, ಪಿಜಿಪಾಳ್ಯ, ಉತ್ತೂರು, ಬೈಲೂರು ಸೇರಿ 49 ಗ್ರಾಮಗಳು ಪರಿಸರ ಸೂಕ್ಷ್ಮ ವಲಯ ವ್ತಾಪ್ತಿಗೆ ಬರಲಿವೆ. ಪರಿಸರಕ್ಕೆ ಹಾನಿಯಾಗುವ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೂ ನಿಷೇಧವಿದೆ. ಇವುಗಳ ಮೇಲೆ ನಿಗಾ ಇಡಲು 13 ಮಂದಿಯ ಮೇಲುಸ್ತುವಾರಿ ಸಮಿತಿಯೂ ರಚನೆಯಾಗಲಿದೆ.
ಪರಿಸರ ಸ್ನೇಹಿ ಚಟುವಟಿಕೆಗೆ ಪ್ರೋತ್ಸಾಹ:
ಪರಿಸರ ಸೂಕ್ಷ್ಮ ವಲಯದಲ್ಲಿ ಮಳೆ ನೀರು ಸಂಗ್ರಹ, ಸಾವಯವ ಕೃಷಿ, ಹಸಿರು ತಂತ್ರಜ್ಞಾನ ಅಳವಡಿಕೆ, ಗುಡಿ ಕೈಗಾರಿಕೆ, ಕಾಡು ಕೃಷಿ, ಪರಿಸರ ಸ್ನೇಹಿ ಸಾರಿಗೆ, ಹಾಳಾದ ಭೂಮಿಯಲ್ಲಿ ಅರಣ್ಯವನ್ನು ಪುನರ್ ಸ್ಥಾಪಿಸುವುದು ಹಾಗೂ ಪರಿಸರ ಜಾಗೃತಿ ಸೇರಿ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವಂತೆ ಸಚಿವಾಲಯ ಸೂಚಿಸಿದೆ. ಕೃಷಿ, ಡೇರಿ ನಡೆಸಲು ಯಾವುದೇ ಅಡ್ಡಿಯಿಲ್ಲ. ಪರಿಸರ ಸೂಕ್ಷ್ಮ ವಲಯವನ್ನಾಗಿ ಘೋಷಿಸಿರುವುರಿಂದ ಗಣಿಗಾರಿಕೆಗೆ ಬ್ರೇಕ್ ಬಿದ್ದಿರುವುದು ಪರಿಸರ ಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ.
ಈ ಚಟುವಟಿಕೆಗೆ ಬ್ರೇಕ್:
- ವಾಣಿಜ್ಯ ಗಣಿಗಾರಿಕೆ, ಕಲ್ಲು ಕ್ವಾರಿ ಹಾಗೂ ಕ್ರಶಿಂಗ್ ಘಟಕಗಳು ಮಾಡುವಂತಿಲ್ಲ
- ನೀರು, ಗಾಳಿ, ಮಣ್ಣು ಹಾಗೂ ಶಬ್ದಮಾಲಿನ್ಯ ಉಂಟುಮಾಡುವ ಉದ್ಯಮಗಳ ಸ್ಥಾಪಿಸುವಂತಿಲ್ಲ
- ದೊಡ್ಡ ಜಲವಿದ್ಯುತ್ ಘಟಕಗಳಿಗೆ ನಿಷೇಧ
- ಹಾನಿಕಾರಕ ವಸ್ತುಗಳ ಬಳಕೆ ಅಥವಾ ಉತ್ಪಾದಿಸುವಂತಿಲ್ಲ
- ಸಂಸ್ಕರಿಸಿದ ನೀರನ್ನು ನೈಸರ್ಗಿಕ ನೀರಿನ ಮೂಲಗಳಿಗೆ ಹರಿಬಿಡುವಂತಿಲ್ಲ
- ಬೃಹತ್ ಮಟ್ಟದ ಕೋಳಿ ಮತ್ತು ಜಾನುವಾರು ಫಾರ್ಮ್ ಮಾಡುವಂತಿಲ್ಲ
- ಮರದ ಮಿಲ್ಗಳು, ಇಟ್ಟಿಗೆ ಗೂಡುಗಳು ಇರುವಂತಿಲ್ಲ
- ವಾಣಿಜ್ಯ ಉದ್ದೇಶದಿಂದ ಉರುವಲು ಕಟ್ಟಿಗೆ ಮಾರುವಂತಿಲ್ಲ, ಬಳಸುವಂತಿಲ್ಲ
ಪರಿಸರಸ್ನೇಹಿ ಪ್ರವಾಸೋದ್ಯಮದ ತಾತ್ಕಾಲಿಕ ಡೇರೆಗಳು, ಮರಗಳ ತೆರವು, ರಸ್ತೆ ವಿಸ್ತರಣೆ-ನಿರ್ಮಾಣ, ಪಾಲಿಥಿನ್ ಬ್ಯಾಗ್ ಬಳಕೆ, ವಾಣಿಜ್ಯ ಫಲಕಗಳ ಅಳವಡಿಕೆಗೆ ನಿಯಂತ್ರಣ ಇರಲಿದೆ. ಬಿಆರ್ಟಿಯಲ್ಲಿ 50ಕ್ಕೂ ಹೆಚ್ಚು ಹುಲಿಗಳಿವೆ ಎಂದು ಅಂದಾಜಿಸಲಾಗಿದ್ದು, ಅಪರೂಪದ ಮರಗಳು, ಪ್ರಾಣಿ ಪ್ರಬೇಧಗಳು ಸಂರಕ್ಷಿತ ಪ್ರದೇಶದಲ್ಲಿದ್ದು ಪರಿಸರ ಸೂಕ್ಷ್ಮ ವಲಯ ಘೋಷಣೆಯಾಗಿರುವುದರಿಂದ ವನ್ಯಸಂಪತ್ತಿನ ರಕ್ಷಣೆಗೆ ಬೆನ್ನೆಲುಬಾಗಲಿದೆ.