ಚಾಮರಾಜನಗರ: ತಾಲೂಕಿನ ಹರವೆ ಗ್ರಾಮದಲ್ಲಿರುವ ಕೋವಿಡ್ ಕೇರ್ ಸೆಂಟರಿನಲ್ಲಿ ಕೋವಿಡ್ ಸೋಂಕಿತರೇ ಏಕಪಾತ್ರಾಭಿನಯ, ಅಭಿಪ್ರಾಯಗಳ ಮೂಲಕ ಕೊರೊನಾ ಜಾಗೃತಿ ಮೂಡಿಸಿದ್ದಾರೆ.
ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ಒಟ್ಟು 41 ಮಂದಿ ಇದ್ದು, ಸೋಮವಾರವಷ್ಟೇ ಮಿಮಿಕ್ರಿ ಗೋಪಿ ಮತ್ತು ತಂಡ ಹಾಸ್ಯ ಸಂಜೆ ನಡೆಸಿದ್ದರು. ಕಾರ್ಯಕ್ರಮದಿಂದ ಉತ್ತೇಜನಗೊಂಡ ಕೆಲ ಸೋಂಕಿತರು ನಿನ್ನೆ ಏಕಪಾತ್ರಾಭಿನಯದ ಮೂಲಕ ಕೊರೊನಾ ಬಗ್ಗೆ ಭಯ ಬೇಡ, ಪರೀಕ್ಷೆ ಮಾಡಿಸಿಕೊಳ್ಳಿ, ಕೋವಿಡ್ ಕೇರ್ ಸೆಂಟರಿಗೆ ದಾಖಲಾಗಿ ಎಂದು ವಾಟಾಳ್ ನಾಗರಾಜ್, ಹೆಚ್.ಡಿ. ದೇವೇಗೌಡ ಮತ್ತಿತ್ತರ ನಾಯಕರ ಧ್ವನಿಯನ್ನು ಅನುಕರಿಸಿ ಕೊರೊನಾ ಜಾಗೃತಿ ಮಾತುಗಳನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಹಾವು ಬಂದಾಗ ನಿಮ್ಮನ್ನು ಬಚಾಯಿಸಿಕೊಳ್ಳಲು ಕಡ್ಡಿ, ದೊಣ್ಣೆ ತೆಗೆದುಕೊಳ್ಳುವಂತೆ ಕೊರೊನಾದಿಂದ ದೂರವಿರಲು ಮಾಸ್ಕ್, ಸ್ಯಾನಿಟೈಸರ್ ತೆಗೆದುಕೊಳ್ಳಿ. ಕೊರೊನಾದಿಂದ ಯಾರೂ ಸಾಯುತ್ತಿಲ್ಲ. ಭಯ, ಆತಂಕ, ಅಸಡ್ಡೆಯಿಂದ ಹೆಚ್ಚು ಮಂದಿ ಮೃತಪಡುತ್ತಿದ್ದಾರೆಂದು ಸೋಂಕಿತರು ಹೇಳಿರುವುದು ಸ್ವಯಂ ಜಾಗೃತಿಗೆ ಮುನ್ನುಡಿ ಬರೆದಿದೆ.
ಕೆಲ ಸೋಂಕಿತರು ಡ್ಯಾನ್ಸ್ ಕೂಡ ಮಾಡಿದ್ದು ಕೊರೊನಾ ವಿರುದ್ಧ ಗೆದ್ದೆ ಗೆಲ್ಲುವೆವು ಎಂಬಂತೆ ಸ್ಟೆಪ್ಸ್ ಕೂಡ ಹಾಕಿದ್ದಾರೆ. ಒಟ್ಟಿನಲ್ಲಿ ಕೋವಿಡ್ ಸೋಂಕಿತರೇ ಕೊರೊನಾ ಜಾಗೃತಿ ಮೂಡಿಸುತ್ತಿರುವುದು ವಿಶೇಷವಾಗಿದೆ.
ಇದನ್ನೂ ಓದಿ: ದೇಶದಲ್ಲಿ ಇದುವರೆಗೆ ಸುಮಾರು 24 ಕೋಟಿ COVID-19 ಲಸಿಕೆ ನೀಡಿಕೆ