ಚಾಮರಾಜನಗರ: ಶಾಲಾ ಮಕ್ಕಳನ್ನು ಅಪಾಯಕಾರಿಯಾಗಿ ಆಟೋದಲ್ಲಿ ಕುಳ್ಳಿರಿಸಿಕೊಂಡು ಕೊಳ್ಳೇಗಾಲ ಭಾಗದ ಆಟೋ ಚಾಲಕರು ಅಪಾಯಕ್ಕೆ ಎಡೆ ಮಾಡಿಕೊಡುತ್ತಿರುವ ಆರೋಪ ಕೇಳಿ ಬಂದಿದೆ.
ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಆಟೋ ಸವಾರಿ ಎಳೆ ಮಕ್ಕಳನ್ನು ಆಟೋ ಹಿಂದೆ ಕುಳ್ಳಿರಿಸಿಕೊಂಡು ವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ಕರೆದೊಯ್ಯಲಾಗುತ್ತಿದೆ. ತಕ್ಷಣ ಬ್ರೇಕ್ ಹಾಕಿದಾಗ, ಇಲ್ಲವೇ ರಸ್ತೆಗುಂಡಿಗೆ ಆಟೋ ಇಳಿದಾಗ ಹಿಂದೆ ಕೂರುವ ಮಕ್ಕಳು ಬೀಳುವ ಸಾಧ್ಯತೆ ಹೆಚ್ಚಿದ್ದರೂ ಶಾಲಾಡಳಿತ ಮಂಡಳಿ ಮತ್ತು ಪೊಲೀಸರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಕೊಳ್ಳೇಗಾಲದ ನಿವಾಸಿಯೊಬ್ಬರು ವಿಡಿಯೋ ಸೆರೆ ಹಿಡಿದು ಈಟಿವಿ ಭಾರತಕ್ಕೆ ನೀಡಿದ್ದಾರೆ. ಇಂದುವಾಡಿ, ಮಧುವನಹಳ್ಳಿ- ಸತ್ತೇಗಾಲ, ನರೀಪುರ, ಉತ್ತಂಬಳ್ಳಿ, ಕುನಗಹಳ್ಳಿ, ಮುಡುಗಂಡ, ಸಿದ್ದಯ್ಯನಪುರದಿಂದ ಆಟೋಗಳಲ್ಲಿ ಮಕ್ಕಳನ್ನು ಕುರಿಗಳಂತೆ ಕೂರಿಸಿ ಯಾವುದೇ ಸುರಕ್ಷಿತ ಕ್ರಮ ಇಲ್ಲದೇ ಕರೆದೊಯ್ಯುತ್ತಿದ್ದು ಸಂಬಂಧಿಸಿದ ಉನ್ನತಮಟ್ಟದ ಅಧಿಕಾರಿಗಳು ಈ ಕುರಿತು ಶೀಘ್ರವೇ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿ ಒತ್ತಾಯಿಸಿದ್ದಾರೆ. ಮನವಿಗೆ ಸ್ಪಂದಿಸಿದ ಎಸ್ಪಿ:
ಈ ಸಂಬಂಧ ದೂರವಾಣಿ ಮೂಲಕ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಪ್ರತಿಕ್ರಿಯಿಸಿ, ಈಗಾಗಲೇ ಆಟೋಗಳಲ್ಲಿ ಶಾಲಾ ಮಕ್ಕಳನ್ನು ಅಸುರಕ್ಷಿತವಾಗಿ ಕರೆದೊಯ್ಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಪಾಯಕಾರಿ ಆಟೋಗಳ ಚಾಲನೆಯನ್ನು ಗಂಭೀರವಾಗಿ ಇಲಾಖೆ ಪರಿಗಣಿಸಿದ್ದು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಆಟೋ ಚಾಲಕರ ನಿರ್ಲಕ್ಷ್ಯಕ್ಕೆ ಕೂಡಲೇ ಪೊಲೀಸ್ ಇಲಾಖೆ ಮತ್ತು ಶಾಲಾ ಆಡಳಿತ ಮಂಡಳಿಗಳು ಬ್ರೇಕ್ ಹಾಕಬೇಕಿದೆ.