ಬೆಂಗಳೂರು: ಮೈತ್ರಿ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಾರ್ಯ ತಂತ್ರದಲ್ಲಿ ಉಭಯ ಪಕ್ಷದ ವರಿಷ್ಠರು ಗಂಭೀರ ತಂತ್ರವನ್ನು ರೂಪಿಸುತ್ತಿದ್ದಾರೆ.
ಲೋಕಸಭೆ ಚುನಾವಣೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಾಗಿ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಬಿಜೆಪಿಯನ್ನು ಮಣಿಸಲು ಎರಡೂ ಪಕ್ಷಗಳು ಹೊಸ ಕಾರ್ಯಸೂಚಿಯನ್ನು ಸಿದ್ದಪಡಿಸಿಕೊಂಡಿವೆ. ಚುನಾವಣೆಗೆ ಕೇವಲ 13 ದಿನಗಳು ಬಾಕಿಯಿದ್ದು, ಬಹಿರಂಗ ಪ್ರಚಾರಕ್ಕೆ 11 ದಿನ ಮಾತ್ರ ಕಾಲಾವಕಾಶವಿದೆ. ರಾಜ್ಯದಲ್ಲಿರುವ ಮೈತ್ರಿ ಸರ್ಕಾರದ ಅತೃಪ್ತರನ್ನು ತಮ್ಮ ಕಡೆ ಸೆಳೆದಿರುವ ಬಿಜೆಪಿಯ ತಂತ್ರಕ್ಕೆ ಜೆಡಿಎಸ್-ಕಾಂಗ್ರೆಸ್ ಪ್ರತಿತಂತ್ರವನ್ನು ಹೆಣೆದಿದ್ದು, ದಿನಂಪ್ರತಿ ಪ್ರತಿ ವಾರ್ಡ್ಗಳಲ್ಲಿ ಯಾವ ಕಾರ್ಯಕರ್ತರು ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆ ಅಧ್ಯಯನ ಮಾಡಲು ತಂಡವೊಂದನ್ನು ಸಿದ್ದಪಡಿಸಿದ್ದು, ಎರಡೂ ಪಕ್ಷಗಳ ವೀಕ್ಷಕರು ಮಾಹಿತಿಗಳನ್ನು ಪಕ್ಷದ ವರಿಷ್ಠರಿಗೆ ರವಾನೆ ಮಾಡಿ ಪ್ರತಿ ತಂತ್ರಕ್ಕೆ ಪಕ್ಷದ ವರಿಷ್ಠರಿಂದ ಆದೇಶವನ್ನು ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜಕೀಯ ಪಕ್ಷಗಳಲ್ಲಿನ ಆಂತರಿಕ ಭಿನ್ನಾಭಿಪ್ರಾಯ, ಅಸಮಾಧಾನ ಹಾಗೂ ಅಭ್ಯರ್ಥಿಗಳ ಕಾರ್ಯ ಶೈಲಿಯ ಬಗ್ಗೆಯೂ ಎರಡೂ ಪಕ್ಷಗಳಿಂದ ನೇಮಕಗೊಂಡಿರುವ ವೀಕ್ಷಕರು ಮಾಹಿತಿಯನ್ನು ಕಲೆಹಾಕಿ ಶಮನಗೊಳಿಸುವ ಪ್ರತಿತಂತ್ರವನ್ನು ರೂಪಿಸುತ್ತಿದ್ದು, ಮೊದಲನೇ ಹಂತದಲ್ಲಿ ಏ.18 ರಂದು ನಡೆಯಲಿರುವ 14 ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನಗಳಿಸಲು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಒಂದೆಡೆ ಸೆಳೆದು ಅವರ ಅತೃಪ್ತಿಯನ್ನು ಶಮನಗೊಳಿಸಿ ಪಕ್ಷದೊಳಗೆ ಕಾರ್ಯೋನ್ಮುಖರಾಗಿ ಕೆಲಸ ಮಾಡಲು ಉತ್ಸಾಹ ತುಂಬುವ ಸೂತ್ರವನ್ನು ವೀಕ್ಷಕರಿಗೆ ಪಕ್ಷದ ವರಿಷ್ಠರು ಕಾಲ ಕಾಲಕ್ಕೆ ರವಾನಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ರಾಜ್ಯದ ದಕ್ಷಿಣ ಭಾಗದ 14 ಕ್ಷೇತ್ರಗಳಲ್ಲಿ ಪ್ರತಿಷ್ಠೆಯ ಕಣವಾಗಿರುವ ಮೈಸೂರು, ಮಂಡ್ಯ, ಹಾಸನ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸುವ ಹಾಗೂ ಬಿಜೆಪಿಯ ಕಾರ್ಯತಂತ್ರವನ್ನು ವಿಫಲಗೊಳಿಸುವ ತಂತ್ರವನ್ನು ನೇಮಕಗೊಂಡಿರುವ ವೀಕ್ಷಕರು ರೂಪಿಸುತ್ತಿದ್ದಾರೆ. ವರಿಷ್ಠರೊಂದಿಗೆ ಸಮಾಲೋಚಿಸಿ ಬರುವ ವಾರದೊಳಗಾಗಿ ಅತೃಪ್ತಿ, ಅಸಮಾಧಾನವನ್ನು ಕೊನೆಗೊಳಿಸಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸುವ ಕಾರ್ಯತಂತ್ರವನ್ನು ಯುಗಾದಿ ಹಬ್ಬದ ನಂತರ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.