ಬೆಂಗಳೂರು: ಮಣಿಪಾಲ್ ಗ್ರೂಪ್ ಕಂಪನಿಗೆ ₹ 62 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರಿಸಿಕೊಂಡ ಆರೋಪಿಯ ವಶಕ್ಕೆ ರಾಜ್ಯ ಪೊಲೀಸ್ ಇಲಾಖೆಯು ರಾಜತಾಂತ್ರಿಕ ಮೊರೆ ಹೋಗಿದೆ.
ಈ ಪ್ರಕರಣದ ಪ್ರಮುಖ ಆಪಾದಿತ ಕತಾರ್ ಏರ್ ವೇಸ್ ಪೈಲೆಟ್ ವಿಶಾಲ್ ಸೋಮಣ್ಣ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ. ಆರೋಪಿ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಇದ್ದರೂ ಕತಾರ್ ಕಾನೂನುಗಳು ಮತ್ತು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದ ಅಡ್ಡಿಯಾಗಿದೆ. ಹೀಗಾಗಿ, ಕಬ್ಬನ್ ಪಾರ್ಕ್ ಪೊಲೀಸರು ಕೇಂದ್ರ ವಿದೇಶಾಂಗ ಇಲಾಖೆಗೆ ಈ ಕುರಿತು ಪತ್ರ ಬರೆದಿದ್ದು, ರಾಜತಾಂತ್ರಿಕ ಮುಖೇನ ಆಪಾದಿತನ ಬಂಧನಕ್ಕೆ ನೆರವಾಗುವಂತೆ ಕೋರಿದೆ.
ಏನಿದು ಪ್ರಕರಣ ?
ಸಂಸ್ಥೆಯಲ್ಲಿ ಮ್ಯಾನೇಜ್ಮೆಂಟ್ ಟ್ರೈನಿಯಾಗಿ ಕೆಲಸಕ್ಕೆ ಸೇರಿಕೊಂಡು ಹಂತ ಹಂತವಾಗಿ ಬೆಳೆದು ಡಿಜಿಎಂ ಹುದ್ದೆಗೇರಿದ್ದ ಸಂದೀಪ್ ಈ ವಂಚನೆಯ ಮಾಸ್ಟರ್ ಮೈಂಡ್. ಕಂಪನಿಯ ಅಧ್ಯಕ್ಷ ಡಾ.ರಂಜನ್ ಪೈ ಮತ್ತು ಶ್ರುತಿ ಪೈ ಅವರ ಖಾಸಗಿ ಖಾತೆ ಮತ್ತು ಇವರಿಗೆ ಸೇರಿದ ನಾನಾ ಅಂತಾರಾಷ್ಟ್ರೀಯ ಕಂಪನಿಗಳ ಹಣವನ್ನು ಸಂದೀಪ್ ಗುರುರಾಜ್ ತನ್ನ ಹಾಗೂ ಪತ್ನಿ ಮತ್ತು ಸ್ನೇಹಿತರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಅದೇ ಹಣದಲ್ಲಿ ಪತ್ನಿ ಮತ್ತು ಸಂಬಂಧಿಕರನ್ನು ವ್ಯವಹಾರಿಕ ಪಾಲುದಾರರನ್ನಾಗಿ ಮಾಡಿಕೊಂಡಿದ್ದಲ್ಲದೆ, ಅವರದೇ ಹೆಸರಿನಲ್ಲಿ ನಿವೇಶನ, ಸ್ವತ್ತುಗಳನ್ನು ಖರೀದಿಸಿದ್ದರು. ಜತೆಗೆ ನಾನಾ ಕಂಪನಿಗಳನ್ನು ತೆರೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಬ್ಬನ್ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ಅಮ್ರಿತಾ ಚೆಂಗಪ್ಪ, ಮೀರಾ ಚೆಂಗಪ್ಪ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಸದ್ಯ ಆಪಾದಿತರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.