ಬೆಂಗಳೂರು: ನಗರ ಶರವೇಗದಲ್ಲಿ ಬೆಳೆದು ಐಟಿ,ಬಿಟಿ ಸಿಟಿ, ಸಿಲಿಕಾನ್ ಸಿಟಿ ಎಂಬ ಖ್ಯಾತಿ ಗಳಿಸಿದರೂ ಪೂರ್ವಿಕರು ನಡೆಸಿಕೊಂಡು ಬಂದ ಜಾತ್ರಾ ಮಹೋತ್ಸವ, ಆಚಾರ ವಿಚಾರಗಳನ್ನು ಮಾತ್ರ ಜನ ಮರೆತಿಲ್ಲ. ಇದಕ್ಕೆ ಉದಾಹರಣೆ ಎಂಬತೆ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವ.
ಹೌದು, ಕಾಡುಗೋಡಿ ಸಮೀಪದ ಖಾಜಿ ಸೋಣ್ಣೆನಹಳ್ಳಿಯಲ್ಲಿ ಸಿದ್ದೇಶ್ವರಸ್ವಾಮಿ ದೇವರ ದೊಡ್ಡ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಈ ಜಾತ್ರಾ ಮಹೋತ್ಸವವನ್ನು ಕುರುಬ ಸಮುದಾಯದವರು ಹಮ್ಮಿಕೊಂಡಿದ್ದರು. ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ದೇಶ್ವರಸ್ವಾಮಿ ದೇವರಿಗೆ ಮೂರು ದಿನಗಳಿಂದ ವಿಶೇಷ ಪೂಜಾ ಕೈಂಕಾರ್ಯ ನಡೆದವು. ಸಿದ್ದೇಶ್ವರಸ್ವಾಮಿ ದೇವಸ್ಥಾನದಿಂದ ಹೂವಿನಿಂದ ಅಂಲಕರಿಸಿದ್ದ ಬಂಡಾರ ಪೆಟ್ಟಿಗೆಯಲ್ಲಿ ದೇವರ ಮೂರ್ತಿ ಹೊತ್ತು ಗ್ರಾಮದ ಹೂರ ಪ್ರದೇಶಕ್ಕೆ ಮೆರವಣಿಗೆ ಮೂಲಕ ತೆರಳಿ ಗಂಗೆ ಪೂಜೆ ( ಹೊಳೆ ಪೂಜೆ) ಮಾಡಲಾಯಿತು.
ಜಾತ್ರಾ ಮಹೋತ್ಸವದಲ್ಲಿ ಬಸವನ ತಲೆ ಮೇಲೆ ಹಾಗೂ ಪವಾಡದರರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವುದು, ವೀರಗಾಸೆ, ಕರಣಿವಾದ್ಯ, ಕೋಲಾಟ, ಗೊರವನ ಕುಣಿತ, ಡೊಳ್ಳು ಕುಣಿತ, ಪೂಜಾ ಕುಣಿತ ನರೆದಿದ್ದ ಭಕ್ತರ ಗಮನ ಸೆಳೆದವು.
ಈ ಜಾತ್ರೆಯ ಪ್ರಮುಖ ಆಕರ್ಷಣೆ ಎಂದರೆ ತೆಂಗಿನಕಾಯಿ ಪವಾಡ. ಜಾತ್ರೆಯಲ್ಲಿ ದೇವರನ್ನು ಹೊಳೆ ಪೂಜೆಗೆ ಕೊಂಡೊಯ್ಯುವ ಮುನ್ನ ದೇವಾಲಯದ ಬಸವನ(ಎತ್ತು) ಮೇಲೆ ತೆಂಗಿನಕಾಯಿ ಒಡೆದು, ನಂತರ ಪವಾಡಗಾರರ ತಲೆಯ ಮೇಲೆ ನಿರಂತರವಾಗಿ ತೆಂಗಿನ ಕಾಯಿಯನ್ನು ಒಡೆಯುವುದು ಎಂಥವರನ್ನು ಒಂದು ಕ್ಷಣ ನಿಬ್ಬೆರಗಾಗುವಂತೆ ಮಾಡುತ್ತದೆ.
ಇನ್ನು ತೆಂಗಿನಕಾಯಿ ಪವಾಡದ ಬಗ್ಗೆ ಪವಾಡಗಾರ ಮುನಿರಾಜ್ ಮಾತನಾಡಿ, ತೆಂಗಿನಕಾಯಿಯ ತೊಟ್ಟನ್ನು ತೆಗೆದು ಚನ್ನಾಗಿ ಉಜ್ಜಿ, ಹೊಳೆ ಪೊಜೆ ಮಾಡಿ, ಆ ಕಾಯಿಯನ್ನು ದೇವರ ಬಳಿ ಇಟ್ಟು ಗಂಗೆ ಪೂಜೆ ಸಲ್ಲಿಸಿ ಗುರು ಹಿರಿಯರ ಆಶೀರ್ವಾದ ಪಡೆದು ಮೊದಲು ಬಸವ(ಎತ್ತು)ಗೆ ಒಡೆದು ನಂತರ ನಮ್ಮ ಸಂಪ್ರದಾಯದಂತೆ ಎಲ್ಲರಿಗೂ ಒಡೆಯಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುರುಬ ಸಮಾಜದ ಕುಲ ಗುರುಗಳಾದ ಹೊಸದುರ್ಗದ ಕನಕ ಗುರು ಪೀಠದ ಈಶ್ವರಾನಂದಪುರಿ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಾವಿರಾರು ಜನರು ಈಶ್ವರಾನಂದಪುರಿ ಸ್ವಾಮಿಗಳ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ಮಲ್ಲಿಕಾರ್ಜುನ ಆರಾಧ್ಯ, ದೇವಾಲಯದ ಗೌರವಧ್ಯಕ್ಷ ಎನ್.ಕೃಷ್ಣಪ್ಪ, ಪ್ರಧಾನ ಅರ್ಚಕ ಶ್ರೀನಿವಾಸ್, ಚಿಕ್ಕಮುನಿಶಾಮಪ್ಪರ ನಂಜುಂಡಪ್ಪ, ಮತ್ತಿತ್ತರರು ಉಪಸ್ಥಿತರಿದ್ದು, ಜಾತ್ರಾ ಮಹೋತ್ಸವಕ್ಕೆ ಕಲ್ಕೆರೆ, ಹಲಸೂರು, ಗೊರವಿಗೆರೆ, ದೇವನಹಳ್ಳಿ, ಶಿವಕೋಟೆ, ಕೆ. ಚನ್ನಸಂದ್ರ, ಅತ್ತಿಬೆಲೆ, ಸುಣ್ಣಘಟ ಸೇರಿದಂತೆ ಖಾಜಿಸೋಣೆನಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿದ್ದರು.