ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಬಹುಮತ ಇಲ್ಲ ಎಂಬ ಭಿತ್ತಿ ಪತ್ರ ಹಿಡಿದು ಬಿಜೆಪಿ ಸದಸ್ಯರಿಂದ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಕ್ಕೆ ವಿಧಾನ ಪರಿಷತ್ ಕಲಾಪ ಬಲಿಯಾಗಿದ್ದು, ಸದನವನ್ನು ನಾಳೆಗೆ ಮುಂದೂಡಿಕೆ ಮಾಡಲಾಯಿತು.
ಬೆಳಗಿನ ಕಲಾಪದಲ್ಲಿ ಪ್ರಶ್ನೋತ್ತರ ಅವಧಿ ಕೈಗೆತ್ತಿಕೊಳ್ಳಲು ಬಿಜೆಪಿ ಅವಕಾಶ ನೀಡದೇ ಇದ್ದ ಪರಿಣಾಮ ಸದನವನ್ನು ಅರ್ಧ ಗಂಟೆ ಮುಂದೂಡಿಕೆ ಮಾಡಲಾಗಿತು. ಪುನಃ ಸದನ ನಡೆಸಲು ಸೇರಿದಾಗ ಸಭಾಪತಿ ಧರ್ಮೇಗೌಡ ಶರಣಪ್ಪ ಮಟ್ಟೂರು ಅವರಿಗೆ ಪ್ರಶ್ನೆ ಕೇಳಲು ಸೂಚನೆ ನೀಡಿದರು. ಈ ಪ್ರಕಾರ ಕೃಷ್ಣಬೈರೇಗೌಡ ಅವರಿಗೆ ಪ್ರಶ್ನೆ ಕೇಳಿದರು. ಇದಕ್ಕೆ ಬಿಜೆಪಿ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಬಹುಮತ ಇಲ್ಲದೇ ಇರುವ ಸರ್ಕಾರ ಇದು, 16 ಮಂದಿ ರಾಜೀನಾಮೆ ನೀಡಿದ್ದಾರೆ. ಸದನ ಹೇಗೆ ನಡೆಸುತ್ತೀರಿ ಎಂದು ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.
ಇನ್ನು ಬಿಜೆಪಿಯವರು ನಾವು ಇಲ್ಲಿಗೆ ತಮಾಷೆ ಮಾಡಲು ಬಂದಿಲ್ಲ, ಸಂವಿಧಾನ ಏನು ಎಂಬುದು ಗೊತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿ, ಭಿತ್ತಿ ಪತ್ರಗಳನ್ನ ಹಿಡಿದು ಧಿಕ್ಕಾರ ಕೂಗಿದದರು. ಸದನ ಸಹಜ ಸ್ಥಿತಿಗೆ ಮರಳದ ಹಿನ್ನಲೆಯಲ್ಲಿ ಕಲಾಪವನ್ನು ನಾಳೆ 11.30 ಕ್ಕೆ ಮುಂದೂಡಿಕೆ ಮಾಡಲಾಯಿತು.