ಬಸವಕಲ್ಯಾಣ: ತಾಲೂಕಿನ ಗೋರ್ಟಾ (ಬಿ) ಗ್ರಾಮ ಸಮೀಪದ ಅರಣ್ಯ ಪ್ರದೇಶದ ಬಳಿ ನಡೆದಿದ್ದ ಯುವಕನ ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಭಾಲ್ಕಿ ತಾಲೂಕಿನ ಮೋರಂಬಿ ಗ್ರಾಮದ ಬಲರಾಮ ದಶರಥ ಚಾಂದೆ (25), ಮಹಾದೇವ ಅಲಿಯಾಸ್ ಪ್ರಶಾಂತ್ ಇಸ್ಲಾಂಪೂರೆ (23) ಬಂಧಿತರು. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನೂ ಮೂವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ...ಗ್ರಾಮ ಪಂಚಾಯತ್ ಸದಸ್ಯರು ವಾರ್ಡ್ಗೆ ಸಿಎಂ ಇದ್ದಂತೆ: ಪ್ರಭು ಚವ್ಹಾಣ್
ಘಟನೆ ವಿವರ: ಭಾಲ್ಕಿಯ ಮದಕಟ್ಟಿ ಗ್ರಾಮದ ರವಿ ನೀಲಪ್ಪ ಕೊಕಣೆ (30) ಎನ್ನುವ ಯುವಕನನ್ನು ಡಿ.26ರಂದು ಕೊಲೆಗೈದು ಗೋರ್ಟಾ(ಬಿ) ಸಮಿಪದ ಅರಣ್ಯ ಪ್ರದೇಶದಲ್ಲಿ ಬಿಸಾಡಲಾಗಿತ್ತು. ಮೊರಂಬಿ ಗ್ರಾಮದ ವಿವಾಹಿತ ಮಹಿಳೆಯೊಂದಿಗೆ 3-4 ವರ್ಷಗಳಿಂದ ರವಿ ಅನೈತಿಕ ಸಂಬಂಧ ಹೊಂದಿದ್ದನು. ಜತೆಗೆ ಅದೇ ಗ್ರಾಮದ ಮತ್ತೋರ್ವ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದನು.

ವಿಷಯ ತಿಳಿದ ಮೊದಲ ಮಹಿಳೆ, ಎರಡನೇ ಮಹಿಳೆಯೊಂದಿಗೆ ಜಗಳ ಆರಂಭಿಸುತ್ತಾಳೆ. ಹೀಗಾಗಿ, ಯುವಕನ ಅನೈತಿಕ ಸಂಬಂಧದ ವಿಷಯ ಇಬ್ಬರು ಮಹಿಳೆಯರ ಕುಟುಂಬಗಳ ನಡುವೇ ವಿವಾದಕ್ಕೆ ಕಾರಣವಾಗಿತ್ತು. ಇದರಿಂದ ಬೇಸತ್ತ ಇಬ್ಬರು ಮಹಿಳೆಯರ ಸಹೋದರರು ತಮ್ಮ ಸ್ನೇಹಿತರೊಂದಿಗೆ ಸೇರಿ ರವಿ ಕೊಲೆಗೆ ಸಂಚು ರೂಪಿಸಿ, ಹತ್ಯೆ ಮಾಡುತ್ತಾರೆ.
ಗ್ರಾಮೀಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಹುಮನಾಬಾದ್ ಬಸ್ ನಿಲ್ದಾಣದಲ್ಲಿ ಆರೋಪಿಗಳು ಇರುವ ಖಚಿತ ಮಾಹಿತಿ ಮೇರೆಗೆ ಸಿಪಿಐ ಮಹೇಶ್ಗೌಡ ಪಾಟೀಲ್ ಮಾರ್ಗದರ್ಶನಲ್ಲಿ ಪಿಎಸ್ಐ ವಸೀಮ್ ಪಟೇಲ್ ನೇತೃತ್ವದ ತಂಡ ದಾಳಿ ನಡೆಸಿ ಹಂತಕರನ್ನು ಬಂಧಿಸಿದರು.