ಬೀದರ್: ಆರು ತಿಂಗಳ ಹಿಂದೆ ಪ್ರೇಮಿಗಳಿಬ್ಬರು ಮನೆಯಿಂದ ಓಡಿ ಹೋಗಿ ಮದುವೆಯಾಗಿದ್ದು, ನಂತರ ಊರಿಗೆ ಬಂದು ಸಂಬಂಧಿಕರಿಗೆ ಔತಣಕೂಟ ನೀಡುವ ವೇಳೆ ಯುವತಿ ತಂದೆ ಗಲಾಟೆ ಮಾಡಿ ಯುವಕನಿಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
![love marraige issue in bidar](https://etvbharatimages.akamaized.net/etvbharat/prod-images/kn-bdr-03-29-lovemarragegalate-7203280-av-01_29082020213216_2908f_1598716936_1060.jpg)
ಇದೇ ವೇಳೆ ಅಣದೂರು ಗ್ರಾಮಕ್ಕೆ ಬಂದ ಹುಡುಗಿ ತಂದೆ ವಿಶ್ವನಾಥ್, ತನ್ನ ಬಳಿ ಇದ್ದ ಪಿಸ್ತೂಲ್ ತೋರಿಸಿ ಯುವಕನ ಅಣ್ಣನನ್ನು ಘಟನಾ ಸ್ಥಳದಿಂದ ಅಪಹರಿಸಿ ಯುವಕ ಯಶವಂತನಿಗೆ ಜೀವ ಬೆದರಿಕೆ ಹಾಕಿದ್ದಲ್ಲದೆ ಸಮಾರಂಭದಲ್ಲಿ ಪುಂಡರ ಗುಂಪಿನಿಂದ ಗಲಾಟೆ ಮಾಡಿಸಿ ಹಲ್ಲೆ ಮಾಡಿದ್ದಾರೆ. ಯಶವಂತನ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ರಾಜಕೀಯವಾಗಿ ಭಾರಿ ಪ್ರಭಾವ ಹೊಂದಿರುವ ವಿಶ್ವನಾಥ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಔರಾದ್ ಮಿಸಲು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿದ್ದರು. ಸಮಾಜದಲ್ಲಿ ನನ್ನ ಮರ್ಯಾದೆ ತೆಗೆದು ಈಗ ಮತ್ತೆ ಔತಣಕೂಟ ನಡೆಸಿ ಸಾಮಾಜಿಕವಾಗಿ ಅಗೌರವ ತಂದಿದ್ದಿಯಾ ಎಂದು ವಿಶ್ವನಾಥ್ ಘಟನಾ ಸ್ಥಳದಲ್ಲಿ ಆಕ್ರೋಶ ವ್ಯಕಪಡಿಸಿದ್ದಾರೆ ಎನ್ನಲಾಗಿದೆ.
ಜೀವ ಬೆದರಿಕೆಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಅಪಹರಣ, ಗಲಭೆ, ಜೀವ ಬೆದರಿಕೆ ಸೇರಿದಂತೆ ಶಾಂತಿ ಭಂಗದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪ್ರಮುಖ ಆರೋಪಿ ವಿಶ್ವನಾಥ್ ಹುಡುಕಾಟಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
![love marraige issue in bidar](https://etvbharatimages.akamaized.net/etvbharat/prod-images/kn-bdr-03-29-lovemarragegalate-7203280-av-01_29082020213216_2908f_1598716936_925.jpg)
ವಿಶ್ವನಾಥ್ ಕುಟುಂಬಸ್ಥರು ಹೇಳುವುದು ಹೀಗೆ: ಮೆಡಿಕಲ್ ವಿದ್ಯಾರ್ಥಿನಿಯಾದ ಸ್ನೇಹಾಳನ್ನು ಬೆಂಗಳೂರಿನಲ್ಲಿ ಯಶವಂತ ಪ್ರೇಮದ ಬಲೆಗೆ ಹಾಕಿಕೊಂಡಿದ್ದಾನೆ. ಖಾಸಗಿ ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಮೇಂಟೆನೈನ್ಸ್ ನೋಡಿಕೊಂಡಿದ್ದ ಈತ ಈ ವೇಳೆಯಲ್ಲಿ ನಮ್ಮ ಮಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದಾನೆ. ಅಲ್ಲದೆ ಇದಕ್ಕೂ ಮೊದಲು ಮೂರು ಯುವತಿಯರ ಬಾಳು ಹಾಳು ಮಾಡಿದ್ದಾನೆ. ಸ್ನೇಹಾಳನ್ನು ಮದುವೆಯಾದರೂ ತಂದೆ ವಿಶ್ವನಾಥ್ ಸುಮ್ಮನಿದ್ದ. ಆದ್ರೆ ವಿಶ್ವನಾಥ್ ಅವರ ಆಸ್ತಿಯಲ್ಲಿ ಅರ್ಧ ಪಾಲು ನೀಡುವಂತೆ ಪೀಡಿಸಿದ್ದಾನೆ. ಕೊಡದೆ ಇದ್ದರೆ ಮರ್ಯಾದೆ ತೆಗೆಯುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಇದರಿಂದ ಕೆರಳಿ ಔತಣಕೂಟ ಹೆಸರಿನಲ್ಲಿ ಬುದ್ಧ ವಿಹಾರದಲ್ಲಿ ನಡೆಯುತ್ತಿರುವ ಮದುವೆ ನಿಲ್ಲಿಸಲು ಹೋಗಿದ್ದರು ಎಂದು ಹುಡುಗಿ ತಂದೆಯ ಕುಟುಂಬಸ್ಥರು ಹೇಳಿದ್ದಾರೆ.