ಬೀದರ್: ಬಿಜೆಪಿಯವರದ್ದು ಸುಳ್ಳಿನ ಕಾರ್ಖಾನೆ ಇದೆ. ದಿನಕ್ಕೊಂದು ಸುಳ್ಳು, ದಿನಕ್ಕೊಂದು ವಾದ ಮಾಡಿ ಬಡವರ ಪಾಲಿನ ವಸತಿ ಯೋಜನೆ ಅಡಿಯಲ್ಲಿ ಮಂಜೂರಾದ ಫಲಾನುಭವಿಗಳಿಗೆ ಕಾಟ ಕೊಡ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ. ಬಿಜೆಪಿ ಮುಖಂಡ ಡಿ.ಕೆ. ಸಿದ್ರಾಮ ಸೇರಿದಂತೆ ಬಿಜೆಪಿ ನಾಯಕರು ಶುದ್ದ ಸುಳ್ಳು ಆರೋಪ ಮಾಡುವುದರಲ್ಲಿ ನಿಸ್ಸೀಮರು, ಅವರ ಬಳಿ ಸುಳ್ಳಿನ ಕಾರ್ಖಾನೆಗಳಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾನು ಶಾಸಕನಾದ ಬಳಿಕ ಬರೋಬ್ಬರಿ 20 ಸಾವಿರಕ್ಕೂ ಅಧಿಕ ಮನೆಗಳನ್ನು ಮಂಜೂರಾತಿ ಮಾಡಿಸಿಕೊಂಡು ಬಂದಿದ್ದೇನೆ. ಅದನ್ನು ನಾನು ಯಾರಿಗೂ ಇಂಥವರಿಗೆ ನೀಡಿ ಎಂದು ಹೇಳಿಲ್ಲಾ, ನಿಯಮಗಳ ಅನುಸಾರವಾಗಿಯೇ ಮನೆಗಳನ್ನ ಹಂಚಿಕೆ ಮಾಡಿದ್ದಾರೆ. ಬಡವರಿಗೆ ಸೂರು ಸಿಗುವುದನ್ನು ಇವರು ಕಸಿದುಕೊಳ್ಳುತ್ತಿದ್ದಾರೆ. ಇದು ಕೇವಲ ಭಾಲ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಮಾತ್ರ ಮನೆಗಳು ಬ್ಲಾಕ್ ಆಗಿಲ್ಲ. ರಾಜ್ಯದ 224 ಕ್ಷೇತ್ರಗಳಲ್ಲಿ ಆಗಿವೆ ಎಂದರು.
ಇನ್ನು ವಸತಿ ಸಚಿವ ಸೋಮಣ್ಣ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿದ್ದು, ಕಳೆದ ಎರಡು ದಿನಗಳ ಹಿಂದೆ ರಾಜೀವ್ ಗಾಂಧಿ ವಸತಿ ಅಧಿಕಾರಿಗಳು ಭಾಲ್ಕಿಗೆ ಆಗಮಿಸಿದ್ದ ಸಂಧರ್ಭದಲ್ಲಿ, ಸಾವಿರಾರು ಜನರು ಅಧಿಕಾರಿಗಳಿಗೆ ಮುತ್ತಿಗೆ ಹಾಕಿದ್ದಕ್ಕೆ ಇದನ್ನು ರಾಜಕೀಯ ಬಣ್ಣ ಬಳೆಯುತ್ತಿದ್ದಾರೆ ಎಂದರು. ಹಾಗೆಯೇ ಜಿಲ್ಲಾ ಪಂಚಾಯಿತಿ ಸಿಇಓ ಅವರು ತನಿಖೆ ನಡೆಸುತ್ತಿದ್ದು, ಅದರಲ್ಲಿಯೂ ಭಾಲ್ಕಿ ಮಾತ್ರ ಹೇಳಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿ ನಡೆಸಿ ಅದಕ್ಕೆ ನಾನು ಸ್ವಾಗತ ಕೋರುತ್ತೆ ಎಂದರು.