ಬೀದರ್/ಬಾಗಲಕೋಟ: ನೆರೆ ಪೀಡಿತ ಪ್ರದೇಶದಲ್ಲಿನ ಸಂತ್ರಸ್ತರ ಬಳಿ ಹೋಗಿ ಪರಿಹಾರ ಸಾಮಗ್ರಿಗಳ ಜೊತೆ ಪಾದರಕ್ಷೆ ನೀಡುವ ಮೂಲಕ ಬೀದರ್ ಯುವಕರು ಜಮಖಂಡಿ ಜನರ ನೋವಿಗೆ ಸ್ಪಂದಿಸಿದ್ದಾರೆ.
ಜಿಲ್ಲೆಯ ಔರಾದ್ ತಾಲೂಕು ಎಬಿವಿಪಿ ಸಂಘಟನೆ ಯುವಕರು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮೆಗುರ, ಕೊನುರ, ಹುಳಾಲ ಹಾಗೂ ಕುಂದುರ ಗ್ರಾಮದ ನಿರಾಶ್ರಿತರಿಗೆ ಪರಿಹಾರ ಕೇಂದ್ರದಲ್ಲಿ ಅಗತ್ಯ ಸಾಮಗ್ರಿ ನೀಡುವ ಮೂಲಕ ಅವರಿಗೆ ಸಾಥ್ ನೀಡಿದ್ದಾರೆ. ಭಯಂಕರ ಜಲ ಪ್ರವಾಹಕ್ಕೆ ತುತ್ತಾಗಿ ಬದುಕಿನ ಆಸರೆಯನ್ನೇ ಕಳೆದುಕೊಂಡು ಬೀದಿಗೆ ಬಂದ ಜನರ ಪುನರ್ ಬದುಕಿಗಾಗಿ ಅಗತ್ಯ ಇರುವ ಅಕ್ಕಿ, ಗೋಧಿ, ರೊಟ್ಟಿ ಪ್ಯಾಕೇಟ್, ಟವೆಲ್, ಸೀರೆ, ಮಕ್ಕಳಿಗೆ ಡ್ರೆಸ್ಗಳು, ಔಷಧಿಗಳು ಹಾಗೂ ವಿಶೇಷವಾಗಿ ಕಾಲಿಗೆ ಚಪ್ಪಲಿ ಸರಬರಾಜು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಊಟ ತಿಂಡಿ ಪರಿಹಾರ ಕೇಂದ್ರದಲ್ಲಿ ಸಿಗ್ತಾ ಇದೆ. ಬಟ್ಟೆನೂ ಕೊಟ್ಟಿದ್ದಾರೆ. ಆದರೆ ಮೂಲಭೂತವಾಗಿ ನಡೆದಾಡಲು ಕಾಲಿಗೆ ಚಪ್ಪಲಿ ಸಿಕ್ಕಿರಲಿಲ್ಲ ಎಂದು ಕೆಲ ಮಹಿಳೆಯರು ನೋವು ತೋಡಿಕೊಂಡಿದ್ದು, ನೆರೆ ಪೀಡಿತ ಭಾಗದಲ್ಲಿ ಕಡು ಬಡತನದಿಂದ ಬೀದಿಗೆ ಬಂದ ಸಂತ್ರಸ್ತರಿಗೆ ಸಾಮೂಹಿಕವಾಗಿ ಪಾದರಕ್ಷೆ ವಿತರಣೆ ಮಾಡುವ ಅಗತ್ಯವಿದೆ ಎಂದು ಸಂಘಟಕ ಅಂಬಾದಾಸ್ ನೆಳಗೆ ಮನವಿ ಮಾಡಿದ್ದಾರೆ.