ಬೀದರ್: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರೇಮ್ ಸಾಗರ್ ದಾಂಡೇಕರ್ ವಿರುದ್ಧ, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬಂಧನದ ಭೀತಿಯಿಂದ ಅವರು, ತಲೆ ಮರೆಸಿಕೊಂಡು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದ್ದು, ಎಫ್ಐಆರ್ ದಾಖಲಾಗಿರುವುದನ್ನ ಖಚಿತ ಪಡಿಸಿದ್ದಾರೆ.
ಬೀದರ್ ನಗರಸಭೆ ಅನುದಾನದ ಎಸ್ಎಫ್ಸಿ ಮುಕ್ತ ನಿಧಿಯಡಿ, ಪರಿಶಿಷ್ಟ ಜಾತಿ ಯುವಕರಿಗೆ ಜಿಮ್ ಉಪಕರಣಗಳು, ಕ್ರೀಡಾ ಸಾಮಗ್ರಿಗಳು, ಗ್ರಂಥಾಲಯ ಮತ್ತು ಕಂಪ್ಯೂಟರ್ಗಳ ವಿತರಣೆಗಾಗಿ ಬರೊಬ್ಬರಿ ₹ 22.50 ಲಕ್ಷ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಪ್ರೇಮ್ ಸಾಗರ್ ಅವರು ನಕಲಿ ಬಿಲ್ಗಳನ್ನು ಸೃಷ್ಟಿಸಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಆರೋಪದಡಿ ಬೀದರ್ ನಿವಾಸಿ ಅವಿನಾಶ್ ದೀನೆ ಎಂಬುವವರು ಎಸಿಬಿಗೆ ದೂರು ನೀಡಿದ್ದರು. ದೂರು ಆಧರಿಸಿ ಎಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು. ತನಿಖೆ ಬಳಿಕ ಐಪಿಸಿ ಸೆಕ್ಷನ್ 409, 420, 465, 466, 468 ಕಲಂ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಇತ್ತ ತನಿಖೆ ಹಂತದಲ್ಲಿರುವಾಗಲೇ ಕಳೆದ ತಿಂಗಳಲ್ಲಿ ಪ್ರೇಮ ಸಾಗರ ಅವರನ್ನು ರಾಜ್ಯ ಸರ್ಕಾರ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಿತ್ತು. ಉಡುಪಿಗೆ ಹೋಗಿ ಕಾರ್ಯನಿರ್ವಹಿಸಬೇಕು ಎನ್ನುವಷ್ಟರಲ್ಲಿ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ವಿಷಯ ತಿಳಿದ ಪ್ರೇಮ್ ಸಾಗರ್, ಕರ್ತವ್ಯಕ್ಕೆ ಹಾಜರಾಗದೇ ಇತ್ತ ಬೀದರ್ ಜಿಲ್ಲೆಯಲ್ಲೂ ಅಧಿಕಾರಿಗಳ ಕೈಗೆ ಸಿಗದೇ ಓಡಾಡುತ್ತಿದ್ದಾರೆ ಎನ್ನಲಾಗಿದೆ.
ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ಅಜ್ಞಾತ ಸ್ಥಳದಿಂದ ಜಾಮೀನು ಕೋರಿ ಅರ್ಜಿ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ. ಕಳೆದ ಹಲವು ವರ್ಷಗಳಿಂದ ಅವ್ಯವಹಾರ ಮತ್ತು ಅಕ್ರಮಗಳನ್ನ ನಡೆಸುತ್ತಿದ್ದಾರೆ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿದ್ದವು.