ಬಸವಕಲ್ಯಾಣ: ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಯಾರಿಗೆ ಎನ್ನುವ ಕುತೂಹಲಕ್ಕೆ ಅಂತಿಮವಾಗಿ ತೆರೆ ಬಿದ್ದಿದ್ದು, ದಿ.ಶಾಸಕ ಬಿ.ನಾರಾಯಣರಾವ್ ಅವರ ಪತ್ನಿಗೆ ಕಾಂಗ್ರೆಸ್ ಹೈ ಕಮಾಂಡ್ನಿಂದ ಟಿಕೆಟ್ ಘೋಷಣೆ ಮಾಡುವ ಮೂಲಕ ಕಲ್ಯಾಣದ ಉಪ ಕದನಕ್ಕೆ ಅಧಿಕೃತ ಚಾಲನೆ ನೀಡಿದೆ.
ದಿವಗಂತ ಶಾಸಕ ಬಿ.ನಾರಾಯಣರಾವ್ ಅಕಾಲಿಕ ನಿಧನದ ನಂತರ ತೆರವಾಗಿರುವ ಸ್ಥಾನಕ್ಕೆ ನಡೆಯಲಿರುವ ಕ್ಷೇತ್ರದ ಉಪ ಚುನಾವಣೆಗೆ ದಿವಂಗತ ಶಾಸಕ ಬಿ.ನಾರಾಯಣರಾವ್ ಅವರ ಧರ್ಮ ಪತ್ನಿ ಮಲ್ಲಮ್ಮ ನಾರಾಯಣರಾವ್ ಅವರಿಗೆ ಟಿಕೆಟ್ ನೀಡುವ ಮೂಲಕ ಪತಿ ಸ್ಥಾನಕ್ಕೆ ಸ್ಪರ್ಧೆಗಾಗಿ ಪತ್ನಿಗೆ ಟಿಕೆಟ್ ನೀಡುವ ಮೂಲಕ ಉಪ ಕದನಕ್ಕೆ ಮಹಿಳೆಗೆ ಕಣಕ್ಕಿಳಿಸಿ, ಅನುಕಂಪದ ಅಲೆಯಲ್ಲಿ ಗೆಲುವಿನ ರಣತಂತ್ರ ಹೆಣೆಯಲು ಮುಂದಾಗಿದೆ.
ಉಪ ಚುನಾವಣೆಗೆ ಕಾಂಗ್ರೆಸ್ನಿಂದ ಸ್ಫರ್ಧೆ ಬಯಸಿ ಸುಮಾರು 23 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ, ಟಿಕೆಟ್ಗಾಗಿ ವರಿಷ್ಠರ ಮಟ್ಟದಲ್ಲಿ ಲಾಬಿ ನಡೆಸಿದರು. ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಪುತ್ರ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದರು. ಅಂತಿಮವಾಗಿ ಮಲ್ಲಮ್ಮ ಹಾಗೂ ವಿಜಯಸಿಂಗ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟು ಟಿಕೆಟ್ ಯಾರ ಪಾಲಾಗಿತ್ತೇ ಎನ್ನುವ ಕುತೂಹಲಕ್ಕೆ ಕಾರಣವಾಗಿತ್ತು.
ಸುಮಾರು 40 ವರ್ಷಗಳ ಕಾಲ ಕ್ಷೇತ್ರದಲ್ಲಿ ಸತತ ಸೋಲುಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ನಾಲ್ಕು ದಶಕಗಳ ನಂತರ ಜಯ ತಂದು ಕೊಡುವ ಮೂಲಕ ನೆಲೆ ಕಲ್ಪಿಸಿದ ಕೀರ್ತಿಗೆ ಬಿ.ನಾರಾಯಣರಾವ್ ಅವರಿಗೆ ದಕ್ಕಿತು. ಆದರೆ ಬಿ.ನಾರಾಯಣರಾವ್ ಅವರು ಶಾಸಕರಾಗಿ ಅರ್ಧ ಅವಧಿ ಪೂರ್ಣಗೊಳಿಸುವ ಮುನ್ನವೇ ಮಹಾಮಾರಿ ಕೊರೊನಾದಿಂದ ವಿಧಿವಶವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿತ್ತು.
ಬಿ.ನಾರಾಯಣರಾವ ನಿಧನದ ನಂತರ ನಡೆಯಲಿರುವ ಉಪ ಚುನಾವಣೆಗೆ ಅಭ್ಯರ್ಥಿ ಯಾರು ಎನ್ನುವ ಗೊಂದಲ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಮೂಡಿತ್ತು. ಆದರೆ ಹಿಂದುಳಿದ ವರ್ಗದ ಮತಗಳಿಂದಲೇ 40 ವರ್ಷದ ನಂತರ ಹಿಂದುಳಿದ ಕಾಂಗ್ರೆಸ್ ಪಕ್ಷಕ್ಕೆ ನೆಲೆ ಸಿಕ್ಕಿತ್ತು. ಹಿಂದುಳಿದ ವರ್ಗಗಳ ಮತಗಳು ಪಡೆಯಬೇಕಾದರೆ ನಾರಾಯಣರಾವ್ ಅವರ ಸ್ಥಾನದಲ್ಲಿ ಅವರ ಪತ್ನಿ ಮಲ್ಲಮ್ಮ ಅವರಿಗೆ ಟಿಕೆಟ್ ನೀಡಿದಲ್ಲಿ ಮಾತ್ರ ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಅವರು ಹೈಕಮಾಂಡ್ ಗಮನಕ್ಕೆ ತಂದಿದ್ದರು. ಹೀಗಾಗಿ ಮಲ್ಲಮ್ಮ ಅವರ ಹೆಸರು ಅಂತಿಮಗೊಳಿಸಿ ಎಐಸಿಸಿಯಿಂದ ಅಧಿಕೃತ ಘೋಷಣೆ ಮಾಡಲಾಗಿದೆ.
ಟಿಕೆಟ್ ಘೋಷಣೆಯಾದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಬಿ,ನಾರಾಯಣರಾವ್ ಪತ್ನಿ ಮಲ್ಲಮ್ಮ, ಕಲ್ಯಾಣ ಕ್ಷೇತ್ರ ಸಾಮಾಜಿಕ ನ್ಯಾಯದ ಪರ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಶರಣರು, ಸಂತರು ನಡೆದಾಡಿದ ಪುಣ್ಯ ಭೂಮಿ ಬಸವಕಲ್ಯಾಣ ಕ್ಷೇತ್ರ ಸಾಮಾಜಿಕ ನ್ಯಾಯದ ಪರವಾಗಿರುವ ಕ್ಷೇತ್ರವಾಗಿದೆ. ಇಲ್ಲಿಯ ಜನರು ಜಾತಿ, ಮತ, ಪಂತಗಳಿಗೆ ಆದ್ಯತೆ ನೀಡದೆ ಸಾಮಾಜಿಕ ನ್ಯಾಯದ ಪರವಾಗಿದ್ದ ತಮ್ಮ ಪತಿ ಬಿ.ನಾರಾಯಣರಾವ್ ಅವರ ಸ್ಥಾನದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸುತ್ತಾರೆ ಎನ್ನುವ ಆತ್ಮವಿಶ್ವಾಸವಿದೆ.
ತಮಗೆ ಸಿಕ್ಕ ಅಲ್ಪಾವಧಿಯಲ್ಲಿಯೇ ಕ್ಷೇತ್ರದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿರುವ ನನ್ನ ಪತಿ, ಬಸವಕಲ್ಯಾಣದಲ್ಲಿ ಐತಿಹಾಸಿಕ ಅನುಭವ ಮಂಟಪ ನಿರ್ಮಾಣ ಸೇರಿದಂತೆ ಇನ್ನು ಅನೇಕ ಅಭಿವೃದ್ದಿ ಕಾರ್ಯ ಯೋಜನೆ ಹಾಕಿಕೊಂಡಿದ್ದರು. ಆದರೆ, ಅವರ ಅಕಾಲಿಕ ನಿಧನದಿಂದ ಅಭಿವೃದ್ದಿ ಕೆಲಸಗಳಿಗೆ ಹಿನ್ನೆಡೆಯಾಗಿದೆ. ಕ್ಷೇತ್ರದ ಅಭಿವೃದ್ದಿಗಾಗಿ ಅವರು ಕಂಡ ಕನಸುಗಳನ್ನು ಸಾಕಾರ ಮಾಡುವುದೇ ನನ್ನ ಬಯಕೆಯಾಗಿದೆ ಎಂದಿದ್ದಾರೆ.
ಇದನ್ನು ಓದಿ: ಕರ್ನಾಟಕ ಉಪಚುನಾವಣೆ: ಮೂರು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಇವರು..