ಬಳ್ಳಾರಿ: ಬದುಕು ನಿಂತಿರುವುದು ವಸ್ತುಗಳಿಂದಲ್ಲ, ಚಿಂತನೆಗಳಿಂದ ಎಂದು ವಿರುಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವೀರಶೈವ ಮಹಾವಿದ್ಯಾಲಯದ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ನುಡಿದರು.
ನಗರದ ಹೊರವಲಯದ ವೀರಶೈವ ಮಹಾವಿದ್ಯಾಲಯದಲ್ಲಿ ನಡೆದ ಪ್ರತಿಭೋತ್ಸವ ಕಾರ್ಯಕ್ರಮವನ್ನು ವಿರುಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿ ಪ್ರವಚನ ನೀಡಿದರು. ನಿನಗೆ ಗೊತ್ತು, ಗುರಿಗಳು ಇಲ್ಲ. ಮನೆ ಕಟ್ಟೋದು, ಕಟ್ಟಡ ಕಟ್ಟೋದು, ಜಾಗ ತೆಗೆದುಕೊಳ್ಳುವುದು, ಹೊಲ ಖರೀದಿಸುವುದು, ಸ್ವಿಸ್ ಬ್ಯಾಂಕ್ನಲ್ಲಿ ಕಟ್ಟುಗಟ್ಟಲೇ ಹಣ ಇಡೋದಲ್ಲ. ಬದಲಿಗೆ ನಿನ್ನನ್ನ ನೀನು ಈ ಜಗತ್ತಿಗೆ ಅನಾವರಣಗೊಳಿಸುವುದೇ ಸಾಧನೆ. ಅದುವೇ ಗೊತ್ತು, ಗುರಿ ಎಂದು ಆಂಗ್ಲ ಕವಿಯ ಹೇಳಿಕೆಯನ್ನು ಸ್ಮರಿಸಿದರು. ಈ ಮೂಲಕ ಸಾಧನೆ ಕಡೆಗೆ ಹೆಚ್ಚಿನ ಗಮನ ಕೊಡುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಂತರ ಯುಪಿಎಸ್ಸಿ ಪರೀಕ್ಷೆಯಲ್ಲಿ 423 ನೇ ರ್ಯಾಂಕ್ ಪಡೆದ ಬಳ್ಳಾರಿ ಜಿಲ್ಲೆಯ ಬಿ.ವಿ ಅಶ್ವಿಜಾ ಮಾತನಾಡಿ, ಪದವಿ ಓದುವಾಗಲೇ ಹೆಚ್ಚೆಚ್ಚು ವಿಷಯ ಮಾಹಿತಿ ತಿಳಿದುಕೊಳ್ಳಬೇಕು. ಸಮಾಜದಿಂದ ಅನೇಕ ಸೌಲಭ್ಯ ಪಡೆದಿದ್ದೇವೆ. ಆದರೆ ಸಮಾಜಕ್ಕೆ ನಮ್ಮ ಕೊಡುಗೆ ಏನು ಎನ್ನುವ ಪ್ರಶ್ನೆಯನ್ನು ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಯುಪಿಎಸ್ಸಿ ಪರೀಕ್ಷೆಯ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಮೆಡಿಕಲ್, ಇಂಜಿನಿಯರಿಂಗ್ ಓದಿ ಮತ್ತೆ ಪದವಿ ವಿಷಯಗಳನ್ನು ಓದುತ್ತಾರೆ. ಆದರೆ ಯುಪಿಎಸ್ಸಿ ಪರೀಕ್ಷೆಯಲ್ಲಿ ವಿಷಯವಾರು ಮೇಲೆ ಪರೀಕ್ಷೆಯನ್ನು ಬರೆಯುವ ಪದ್ಧತಿ ಇದೆ. ಪದವಿ ಮುಗಿದ ನಂತರ ಯುಪಿಎಸ್ಸಿ ಪರೀಕ್ಷೆಗೆ ತರಬೇತಿ ಬೇಕು ಅಷ್ಟೆ. ಯುಪಿಎಸ್ಸಿ ಪರೀಕ್ಷೆಗೆ ಉತ್ತೀರ್ಣರಾದರೆ ಅಧಿಕಾರಿಯಾಗಿ ಜನರಿಗೆ ಸಹಾಯ ಮಾಡಬಹುದು ಎಂದರು.
ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು:
ಬಳಿಕ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಜಾನಪದ ನೃತ್ಯ, ಭಾವಗೀತೆ, ಸಿನಿಮಾ ಹಾಡು, ನೃತ್ಯ ಮಾಡಿ ವಿದ್ಯಾರ್ಥಿಗಳು ನೆರದಿದ್ದ ಜನರ ಮನಸೂರೆಗೊಳಿಸಿದರು. ವಿಶೇಷವಾಗಿ ಜಮ್ಮು ಕಾಶ್ಮೀರ, ಕೇರಳ, ಆಂಧ್ರ ಪ್ರದೇಶ, ಕರ್ನಾಟಕ, ಪಂಜಾಬ್, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಇನ್ನಿತರ ರಾಜ್ಯದ ವಸ್ತ್ರಗಳನ್ನು ಧರಿಸಿ ವೇದಿಕೆಯ ಮೇಲೆ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಉಡೇದ್ ಬಸವರಾಜ್, ಚೋರ್ ನೂರ್ ಕೊಟ್ರಪ್ಪ, ಗೋನಾಳ್ ರಾಜಶೇಖರ ಗೌಡ, ಶಶಿಕಲಾ, ಹಚ್ಚೊಳಿ ಶರಣಬಸವನಗೌಡ, ರಾಮನಗೌಡ, ಜಿ.ರಾಜಶೇಖರ್ ಮತ್ತು ಕಾಲೇಜಿನ ಉಪನ್ಯಾಸಕರು ಮತ್ತು ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.