ಬಳ್ಳಾರಿ: ಜಿಲ್ಲೆಯ ಗಡಿನಾಡಿನ ವೀರ ಕನ್ನಡಾಭಿಮಾನಿ ಎಂದೇ ಖ್ಯಾತಿ ಪಡೆದಿರುವ ಶ್ರೀಧರಗಡ್ಡೆ ಸಿದ್ಧಬಸಪ್ಪ ನಿಧನರಾಗಿದ್ದಾರೆ.
ಅನಾರೋಗ್ಯ ಪೀಡಿತರಾಗಿದ್ದ ಶ್ರೀಧರಗಡ್ಡೆ ಸಿದ್ಧಬಸಪ್ಪನವರು ನೆರೆಯ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಆಲೂರು ತಾಲೂಕಿನ ಹೊಳಲಗುಂದಿ ಮಂಡಲಂನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಗಡಿನಾಡಿನ ಕನ್ನಡ ಶಾಲೆಗಳ ಉಳಿವಿಗಾಗಿ ಶತಾಯಗತಾಯ ಹೋರಾಟ ನಡೆಸಿರುವ ಇವರನ್ನು ಕಾಯಕ ಯೋಗಿ ಎಂದು ಬಣ್ಣಿಸಿದ್ರೆ ತಪ್ಪಾಗಲಾರದು. ಬಳ್ಳಾರಿಯ ಅಂಗಡಿಯೊಂದರಲ್ಲಿ ದಿನಗೂಲಿ ನೌಕರರಾಗಿದ್ದ ಶ್ರೀಧರಗಡ್ಡೆ ಸಿದ್ಧಬಸಪ್ಪನವ್ರು, ಗಡಿನಾಡ ಶಾಲೆಗಳಿಗೆ ಪಾಠೋಪಕರಣ ಸೇರಿದಂತೆ ಶಿಥಿಲಾವಸ್ಥೆಯಲ್ಲಿದ್ದ ಶಾಲೆಗಳ ದುರಸ್ತಿಗೂ ತಮ್ಮ ಕೈಯಿಂದ ಹಣವನ್ನೂ
ನೀಡಿ ಆ ಭಾಗದ ಕನ್ನಡ ಶಾಲೆಗಳ ಉಳಿವಿಗೆ ನಿರಂತರವಾಗಿ ಶ್ರಮಿಸಿದ್ದರು. ಆ ಮೂಲಕ ರಾಜ್ಯ ಸರ್ಕಾರದ ವಿಶೇಷ ಗಮನ ಸೆಳೆದಿದ್ದರು.
ಇವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಇನ್ನಿತರೆ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನೆರೆಯ ಅನಂತಪುರ ಜಿಲ್ಲೆಯ ಹೆಚ್.ಎಸ್. ತಾಂಡಾ, ಹೆಚ್.ಸಿದ್ದಾಪುರಂ, ಮಲಪನಗುಡಿ, ಮಡೇನಹಳ್ಳಿ ಇನ್ನಿತರೆ ಸರ್ಕಾರಿ ಕನ್ನಡ ಶಾಲೆಗಳಿಗೆ ಕಲಿಕಾ ಸಾಮಗ್ರಿ, ಸಮಾಜ, ವಿಜ್ಞಾನ ಪಾಠೋಪಕರಣಗಳನ್ನ ದೇಣಿಗೆಯಾಗಿ ನೀಡಿರೋದು ಕನ್ನಡ ಭಾಷೆಯ ಉಳಿವಿಗೆ ಅವರ ಈ ವಿಶೇಷ ಮುತುವರ್ಜಿಗೆ ಸಾಕ್ಷಿಯಾಗಿವೆ.
ಕಂಬನಿ...
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ಧರಾಮ ಕಲ್ಮಠ, ನಿಕಟಪೂರ್ವ ಅಧ್ಯಕ್ಷ ನಿಷ್ಠಿರುದ್ರಪ್ಪ, ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ, ಅನಂತಪುರ ಜಿಲ್ಲಾ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಗಿರಿಜಾಪತಿ, ನವ ಕರ್ನಾಟಕ ಯುವಶಕ್ತಿ ಸಂಘಟನೆಯ ಮುಖಂಡ ಕಪ್ಪಗಲ್ಲು ಚಂದ್ರಶೇಖರ ಆಚಾರ್ಯ ಸೇರಿದಂತೆ ಇನ್ನಿತರ ಗಣ್ಯರು ಕಂಬನಿ ಮಿಡಿದಿದ್ದಾರೆ.