ಬಳ್ಳಾರಿ: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮೇ 24 ರಿಂದ 30 ರವರೆಗೆ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ ಲಾಕ್ಡೌನ್ನಿಂದಾಗಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಮನೆಯಲ್ಲೇ ಇದ್ದಾರೆ. ಮನೆಯವರು ವಿದ್ಯಾರ್ಥಿಗಳ ಕೈಗೆ ನೀಡಿರುವ ಸ್ಮಾರ್ಟ್ ಫೋನ್ ಸಹಾಯದೊಂದಿಗೆ ಈಗಾಗಲೇ ಆನ್ಲೈನ್ ಮೂಲಕ ಅವರಿಗೆ ಪಾಠ ಬೋಧಿಸುವ ಕಾರ್ಯ ಶುರುವಾಗಿದೆ. ಯಾರು ಈ ಸ್ಮಾರ್ಟ್ ಫೋನ್ ಬಳಸುತ್ತಾರೆಯೋ ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಈ ಪರೀಕ್ಷೆ ನಡೆಸಲಾಗುತ್ತದೆ ಎಂದು ಡಿಡಿಪಿಐ ಸಿ.ರಾಮಪ್ಪ ತಿಳಿಸಿದ್ದಾರೆ.
ಈ ಪೂರ್ವ ಸಿದ್ಧತಾ ಪರೀಕ್ಷೆಯು ಮುಂದಿನ ಅಂತಿಮ ಪರೀಕ್ಷೆಗೆ ಸಹಕಾರಿ ಆಗಲಿದೆ. ಶಿಕ್ಷಣ ಇಲಾಖೆಯಿಂದ ಪ್ರಶ್ನೆ ಪತ್ರಿಕೆ ತಯಾರಿಸಿ ಆಯಾ ಶಾಲೆಗಳ ಮುಖ್ಯ ಶಿಕ್ಷಕರ ವಾಟ್ಸಾಪ್ಗೆ ರವಾನಿಸಲಾಗುವುದು. ಅವರು ಅಲ್ಲಿಂದ ವಿದ್ಯಾರ್ಥಿಗಳಿಗೆ ಈ ಪ್ರಶ್ನೆ ಪತ್ರಿಕೆಗಳನ್ನು ರವಾನೆ ಮಾಡಲಿದ್ದಾರೆ. ವಿದ್ಯಾರ್ಥಿಗಳು ಉತ್ತರ ಬರೆದು ಮರಳಿ ಆಯಾ ವಿಷಯವಾರು ಶಿಕ್ಷಕರ ವಾಟ್ಸಾಪ್ ಗ್ರೂಪ್ ಉತ್ತರ ಪತ್ರಿಕೆಯನ್ನ ರವಾನೆ ಮಾಡಲಿದ್ದಾರೆಂದು ಅವರು ವಿವರಿಸಿದರು.