ಬಳ್ಳಾರಿ: ತಾಲೂಕಿನ ವಿಧವೆಯರಿಗೆ, ವಿಶೇಷಚೇತನರಿಗೆ ಒಂಬತ್ತು ತಿಂಗಳಿನಿಂದ ಮಾಸಾಶನ ಪಾವತಿಯಾಗದ ಹಿನ್ನೆಲೆ ಬಳ್ಳಾರಿ ತಹಶೀಲ್ದಾರ್ ಕಚೇರಿಗೆ ಅಲೆದಾಡಿ ರೋಸಿ ಹೋಗಿದ್ದಾರೆ. ಲಾಕ್ಡೌನ್ಗಿಂತಲೂ ಮುಂಚಿತವಾಗಿಯೇ ಈ ಸಮಸ್ಯೆ ಎದುರಾಗಿದ್ದು, ಇದರಿಂದ ಮಾಸಾಶನದಲ್ಲಿಯೇ ಜೀವನ ಸಾಗಿಸುವವರ ಸ್ಥಿತಿ ಬಹಳ ಕ್ಲಿಷ್ಟಕರವಾಗಿದೆ.
ವಿಧವೆಯರು, ವಿಶೇಷಚೇತನರು, ವಯಸ್ಕರು ಮಾಸಾಶನಕ್ಕೆ ಅರ್ಹರು ಅಥವಾ ಅನರ್ಹರರೋ ಎಂಬುದನ್ನ ಪರಿಶೀಲಿಸುವ ಸಲುವಾಗಿ ಸರ್ಕಾರ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಲು ಹೊರಟಿದೆ. ಕೆಲವೆಡೆ ಈ ಮಾಸಾಶನವನ್ನ ಎರಡೆರಡು ಕಡೆಗಳಲ್ಲಿ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಮಾಸಾಶನ ಪಡೆಯೋ ಮುನ್ನವೇ ಪ್ರತಿಯೊಬ್ಬರನ್ನ ಪರಿಶೀಲನೆಗೆ ಒಳಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಾಗಾಗಿ ನಿಜವಾದ ಮಾಸಾಶನ ಪಡೆಯೋ ಅರ್ಹ ಫಲಾನುಭವಿಗಳಿಗೆ ಭಾರಿ ಸಮಸ್ಯೆ ಎದುರಾಗುತ್ತಿದೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ವಿಶೇಷಚೇತನ ನಾಗರಾಜ ಅವರು, ಕಳೆದ ಒಂಬತ್ತು ತಿಂಗಳಿಂದಲೂ ನನಗೆ ಮಾಸಾಶನ ಬರುತ್ತಿಲ್ಲ. ಅದನ್ನ ತಹಶೀಲ್ದಾರ್ ಕಚೇರಿಯಲ್ಲಿ ಕೇಳಿದ್ರೆ ಸಾಕು. ನಿಮ್ಮ ಫೈಲ್ ಅಲ್ಲಿಗೆ ಇಲ್ಲಿಗೆ ಹೋಗಿದೆ. ಅಲ್ಲಿ ಕೇಳಿ, ಇಲ್ಲಿ ಕೇಳಿ ಅಂತಾ ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ಈ ಸಂಬಂಧ ಡಿಸಿ ನಕುಲ್ ಅವರ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಮಾಸಾಶನ ನೀಡಲು ಇಷ್ಟೊಂದು ತಿರುಗಾಡಿಸುವ ಈ ಅಧಿಕಾರಿ ವರ್ಗ ಶ್ರೀಸಾಮಾನ್ಯರ ಸಮಸ್ಯೆಯನ್ನ ಹೇಗೆ ಆಲಿಸುತ್ತಾರೆ ಅಂತ ನಾಗರಾಜ ಪ್ರಶ್ನಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಸಹಾಯಕ ತಹಶೀಲ್ದಾರ್ ಎನ್. ವರಪ್ರಸಾದ ಅವರು, ತಾಂತ್ರಿಕ ಸಮಸ್ಯೆಯಿಂದ ಈ ಮಾಸಾಶನ ಪಾವತಿಸುವ ಸಮಸ್ಯೆ ಎದುರಾಗಿದೆ. ಅವರು ಸಕಾಲದಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ಪೂರಕ ಮಾಹಿತಿ ಒದಗಿಸಿದ್ರೆ ಸಾಕು. ಅಂಥವರಿಗೆ ಈ ಮಾಸಾಶನ ಪಾವತಿ ಕಡ್ಡಾಯವಾಗಲಿದೆ. ಈಗಾಗಲೇ 18 ಸಾವಿರಕ್ಕೂ ಅಧಿಕ ಮಂದಿಯ ತಾಂತ್ರಿಕ ದೋಷವನ್ನ ಕ್ಲಿಯರ್ ಮಾಡಲಾಗಿದೆ. ಅವರೆಲ್ಲರಿಗೂ ಸಕಾಲದಲ್ಲಿ ಮಾಸಾಶನ ಪಾವತಿಯಾಗಲಿದೆ. ಉಳಿದವರು ಆದಷ್ಟು ಬೇಗನೆ ಈ ಪೂರಕ ದಾಖಲೆಗಳನ್ನ ತಹಶೀಲ್ದಾರ್ ಕಚೇರಿಗೆ ಸಲ್ಲಿಸಿದ್ರೆ ಸಾಕು. ಅವರಿಗೂ ಕೂಡ ಹಿಂದಿನ ಬಾಕಿಯೊಂದಿಗೆ ಇವತ್ತಿನವರೆಗಿನ ಮಾಸಾಶನ ಅವರ ಬ್ಯಾಂಕ್ ಖಾತೆಗೆ ಪಾವತಿಯಾಗಲಿದೆ ಎಂದರು.