ಬಳ್ಳಾರಿ: ವಿಶೇಷ ಚೇತನ ವ್ಯಕ್ತಿಯೊಬ್ಬರು ಕಳೆದ 30 ವರ್ಷಗಳಿಂದ ಪ್ರಾಚೀನ, ನವೀನ, ದೇಶ, ವಿದೇಶಗಳ ನಾಣ್ಯಗಳ ಸಂಗ್ರಹದಲ್ಲಿ ತೊಡಗಿದ್ದಾರೆ. ಜತೆಗೆ ಅಂಚೆ ಚೀಟಿಗಳ ಸಂಗ್ರಹವನ್ನೂ ಮಾಡಿಟ್ಟಿದ್ದಾರೆ. ವಿವಿಧೆಡೆ ಪ್ರದರ್ಶನಗಳನ್ನು ನಡೆಸಿ, ಅನೇಕ ವಿದ್ಯಾರ್ಥಿಗಳಿಗೆ ಗತಕಾಲವನ್ನು ಪರಿಚಯಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಬಳ್ಳಾರಿಯ ರೇಣುಕಾ ನಗರ ನಿವಾಸಿ ಸೋಮನಾಥ ಸಾಲಿಮಠ ಅವರು, ಈ ಕಾರ್ಯದಲ್ಲಿ ತೊಡಗುವ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಪ್ರಸ್ತುತ ಜಿ. ಚೆಂಗಾರೆಡ್ಡಿ ಮಾನಸಿಕ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ, ವಿಶೇಷ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಪ್ರವೃತ್ತಿಯಾಗಿ ಈ ಸಂಗ್ರಹದ ಅಭಿರುಚಿಯನ್ನು ಬೆಳೆಸಿಕೊಂಡಿದ್ದಾರೆ. ಸೋಮನಾಥ ಅವರು ಚಿತ್ರಸಂತೆ, ಸಂಕ್ರಾಂತಿ ವೈಭವದಲ್ಲಿ ತಮ್ಮ ಸಂಗ್ರಹಗಳನ್ನು ಪ್ರದರ್ಶನ ಮಾಡಿದ್ದಾರೆ.
ವಿಶೇಷ ಅಂಚೆ ಚೀಟಿ ಸಂಗ್ರಹ
1965 - 2020 ರವರೆಗಿನ 5 ಪೈಸೆಯಿಂದ 500 ರೂ. ಬೆಲೆ ಬಾಳುವ ಸುಮಾರು 500 ಅಂಚೆ ಚೀಟಿಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಭಾರತೀಯ ಕಲೆ, ವಾಸ್ತುಶಿಲ್ಪ, ಸಂಸ್ಕೃತಿ, ವಸ್ತ್ರವಿನ್ಯಾಸ, ರಾಮಾಯಣ ಮಹಾಭಾರತ, ಸ್ವತಂತ್ರ್ಯ ಹೋರಾಟ, ಜಲಿಯನ್ ವಾಲಾಬಾಗ್ ದುರಂತ, ಪೊಲೀಸ್ ಹುತಾತ್ಮ ದಿನಾಚರಣೆ, ಕೃಷಿ, ಸಮ್ಮೇಳನದ ನೆನಪಿನಾರ್ಥವಾಗಿ ಬಿಡುಗಡೆಯಾದ ಅಂಚೆ ಚೀಟಿಗಳನ್ನು ಸಂಗ್ರಹಿಸಿದ್ದಾರೆ.
ಪ್ರವಾಸ ತಾಣಗಳು, ಪ್ರಾಣಿ ಪಕ್ಷಿಗಳು, ಕುಟುಂಬ ಯೋಜನೆ, ಆರೋಗ್ಯ, ತಂತ್ರಜ್ಞಾನ ಬಾಹ್ಯಾಕಾಶ, ಷ ಮಂಡಳಿ, ರಾಷ್ಟ್ರೀಯ ಕಾರ್ಮಿಕ, ಹಬ್ಬ-ಹರಿದಿನಗಳನ್ನು ಬಿಂಬಿಸುವ, ದೇಶದ ಸಂವಿಧಾನ ಹೀಗೆ ಅನೇಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಅಂಚೆ ಚೀಟಿಗಳು, ಅಂಚೆ ಕಾರ್ಡುಗಳು, ಪೋಸ್ಟಲ್ ಕವರ್ಗಳನ್ನು ಸಂಗ್ರಹಿಸಿದ್ದಾರೆ. ಇವೆಲ್ಲವುಗಳನ್ನು ಬಳ್ಳಾರಿಯಲ್ಲಿ ನಡೆಯುತ್ತಿರುವ ಚಿತ್ರಸಂತೆ, ಸಂಕ್ರಾಂತಿ ವೈಭವದಲ್ಲಿ ಪ್ರದರ್ಶನಕ್ಕಿದ್ದರು. ಈ ಕಾರ್ಯಕ್ರಮದಲ್ಲಿ ಅವರಿಗೆ ಬಳ್ಳಾರಿ ಕಲಾ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಗುತ್ತಿದೆ.
ನಾಣ್ಯ ಸಂಗ್ರಹ:
ಸೋಮನಾಥ ಅವರು ಭಾರತೀಯ 1 ಪೈಸೆಯಿಂದ ಇತ್ತೀಚೆಗಿನ 10 ರೂ. ನಾಣ್ಯದವರೆಗೆ ಹಾಗೂ ಸ್ವತಂತ್ರ ಪೂರ್ವ ಈಸ್ಟ್ ಇಂಡಿಯಾ ಕಂಪನಿ ಬಿಡುಗಡೆ ಮಾಡಿದ, 1818 - 1835ರ ಅವಧಿಯಲ್ಲಿನ ಹಾಗೂ ಸ್ವತಂತ್ರ ಭಾರತದ 1947 ರಿಂದ ಇತ್ತೀಚಿನವರೆಗೆ ವಿವಿಧ ಸಂದರ್ಭದಲ್ಲಿ ಬಿಡುಗಡೆ ಮಾಡಿದ ನಾಣ್ಯಗಳು, 5 ಪೈಸೆ, 25 ಪೈಸೆ, 50 ಪೈಸೆ, 1ರೂ. 2, 5 ಹಾಗೂ 10 ರೂ. ನಾಣ್ಯಗಳನ್ನು ಸಂಗ್ರಹಿಸಿದ್ದಾರೆ.
ಹೀಗೆ ವಿವಿಧ ಸುಮಾರು 1,000ಕ್ಕೂ ಹೆಚ್ಚು ನಾಣ್ಯಗಳಲ್ಲದೇ, ದೇಶ ವಿದೇಶಗಳ ನೋಟುಗಳನ್ನು ಕೂಡ ಸಂಗ್ರಹಿಸಿದ್ದಾರೆ. ಈ ಮೂಲಕ ಅವರು ವಿದ್ಯಾರ್ಥಿಗಳಿಗೆ ಅವುಗಳ ಮಾಹಿತಿಯನ್ನು ತಿಳಿಸುವ ಕೆಲಸ ಮಾಡುತ್ತಿದ್ದಾರೆ.