ಹೊಸಪೇಟೆ : ಸಮೀಪದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಇಂದು 28ನೇ ನುಡಿಹಬ್ಬ ಹಾಗೂ ಘಟಿಕೋತ್ಸವದಲ್ಲಿ ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರೂ ಆದ ಡಾ.ಸಿ ಎಸ್ ಅಶ್ವತ್ಥ್ ನಾರಾಯಣ ಅವರು ಪ್ರತಿಷ್ಠಿತ ನಾಡೋಜ ಪ್ರಶಸ್ತಿ ಪ್ರದಾನ ಮಾಡಿದರು.

ವೈದ್ಯಕೀಯ ಕ್ಷೇತ್ರದಿಂದ ಡಾ.ಹನುಮಂತ ಗೋವಿಂದಪ್ಪ ದಡ್ಡಿ ಹಾಗೂ ಶಿಕ್ಷಣ ಕ್ಷೇತ್ರದಿಂದ ಡಾ.ವೂಡೇ ಪಿ.ಕೃಷ್ಣ ಅವರಿಗೆ ನಾಡೋಜ ಪ್ರಶಸ್ತಿ ನೀಡಲಾಯಿತು. ಡಿಲಿಟ್, ಪಿಹೆಚ್ಡಿ ಹಾಗೂ ಎಂಫಿಲ್ಗಳನ್ನು ನೀಡಿ ಗೌರವಿಸಲಾಯಿತು. ಇದಕ್ಕೂ ಮುನ್ನ ಘಟಿಕೋತ್ಸವದ ಮೆರವಣಿಗೆ ನಡೆಯಿತು.

ರಾಷ್ಟ್ರೀಯ ಮೌಲ್ವೀಕರಣ ಮತ್ತು ಮಾನ್ಯತಾ ಪರಿಷತ್(ಎನ್ಎಎಸಿ) ನಿರ್ದೇಶಕ ಮತ್ತು ವಿಶ್ರಾಂತ ಕುಲಪತಿ ಪ್ರೊ.ಎಸ್ ಸಿ ಶರ್ಮಾ ಘಟಿಕೋತ್ಸವ ಭಾಷಣದಲ್ಲಿ, ಕನ್ನಡ ವಿಶ್ವವಿದ್ಯಾಲಯ ಭಾಷೆಯ ಉಳಿವಿಗಾಗಿ ಸ್ಥಾಪನೆಯಾಗಿದೆ. ಸಂಸ್ಕೃತಿ ಮತ್ತು ಭಾಷೆಯ ಅಸ್ಮಿತೆಯಿಂದಲೇ ಕನ್ನಡ ವಿಶ್ವವಿದ್ಯಾಲಯವನ್ನು ಗುರುತಿಸಲಾಗುತ್ತದೆ. ವಿಶ್ವವಿದ್ಯಾಲಯದಲ್ಲಿ ಸದಾ ಸಂಶೋಧನಾ ಚಟುವಟಿಕೆಗಳು ನಿರಂತವಾಗಿ ನಡೆಯುತ್ತಿರುತ್ತವೆ ಎಂದು ಹೇಳಿದರು.

ಕುಲಪತಿ ಸ ಚಿ ರಮೇಶ ಮಾತನಾಡಿ, ಕನ್ನಡ-ಕರ್ನಾಟಕ ಕಲಿಕೆಯ ಮುನ್ನಡೆ. ಅಧ್ಯಯನ ಮತ್ತು ಪ್ರಸಾರಕ್ಕಾಗಿ ಶ್ರೀ ಪಂಪಾ ವಿರೂಪಾಕ್ಷನ ನೆಲೆಯಾದ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೊಂಡಿದೆ. ಕನ್ನಡವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವುದು ಮತ್ತು ಸಾಂಸ್ಕೃತಿಕ ಚಹರೆಗಳನ್ನು ವಿಸ್ತರಿಸುವ ಕೆಲಸವನ್ನು ಮಾಡುತ್ತಿದೆ.
ಸಂಸೋಧನೆಗೆ ಅವಕಾಶ ಮಾಡಿಕೊಡುವ ಮೂಲ ಉದ್ದೇಶಕ್ಕಾಗಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಕನ್ನಡವು ಕನ್ನಡವ ಕನ್ನಡಿಸುತಿರಬೇಕು ಎಂಬ ವರಕವಿ ಬೇಂದ್ರೆಯವರ ಮಾತಿನಂತೆ ಕೆಲಸವನ್ನು ನಿರ್ವಹಿಸುತ್ತಿದೆ ಎಂದರು. ಪ್ರಶಸ್ತಿ ಪ್ರದಾನ ಸಮಾಂಭದಲ್ಲಿ ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಸೇರಿದಂತೆ ವಿವಿಯ ಸಿಬ್ಬಂದಿ ಹಾಜರಿದ್ದರು.
ಉದ್ಘಾಟನೆ ಹಾಗೂ ಶಿಲಾನ್ಯಾಸ : ಇದಕ್ಕೂ ಮೊದಲು ವಿವಿ ಆವರಣದಲ್ಲಿ ಸಂಗೀತ ಮತ್ತು ನೃತ್ಯ ವಿಭಾಗದ ಹಾಗೂ ಹಸ್ತಪ್ರತಿ ಭಂಡಾರ ಕಟ್ಟಡಗಳ ಉದ್ಘಾಟನೆ, ಒನಕೆ ಓಬವ್ವ ಅಧ್ಯಯನ ಕೇಂದ್ರದ ಶಿಲಾನ್ಯಾಸವನ್ನು ಸಚಿವ ಅಶ್ವತ್ಥ್ ನಾರಾಯಣ ಅವರು ನೆರವೇರಿಸಿದರು. ಅರಣ್ಯ ಸಚಿವ ಆನಂದ್ ಸಿಂಗ್ ಈ ವೇಳೆ ಹಾಜರಿದ್ದರು.
ಆನ್ಲೈನ್ನಲ್ಲಿ ನೇರ ಪ್ರಸಾರ : ಕೋವಿಡ್-19 ಹಿನ್ನೆಲೆ ವಿದ್ಯಾರ್ಥಿಗಳಿಗೆ ಹಾಗೂ ಬೋಧಕ, ಬೋಧಕೇತರರು, ಸಂಶೋಧಕರು ಹಾಗೂ ಸಾರ್ವಜನಿಕರಿಗೆ ಕಾರ್ಯಕ್ರಮದಲ್ಲಿ ಅವಕಾಶವನ್ನು ನೀಡಿರಲಿಲ್ಲ. ಯೂಟ್ಯೂಬ್, ಝೂಮ್ ಮೀಟಿಂಗ್ನಲ್ಲಿ ಕಾರ್ಯಕ್ರಮವನ್ನು ನೋಡಲು ಅವಕಾಶ ಕಲ್ಪಿಸಲಾಗಿತ್ತು.