ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಮಳೆ ಮತ್ತು ಸಿಡಿಲಿನ ಅಬ್ಬರ ಮುಂದುವರೆದಿದೆ. ಇಂದು ಮಧ್ಯಾಹ್ನ ಕೂಡ್ಲಿಗಿ ತಾಲೂಕಿನ ನೇಲಬೊಮ್ಮನಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ 13 ಮೇಕೆಗಳು ಸಾವನ್ನಪ್ಪಿವೆ.
ಇವು ಗ್ರಾಮದ ಬಾಲರಾಜು ಎಂಬುವರಿಗೆ ಸೇರಿದ ಮೇಕೆಗಳಾಗಿವೆ. ಗ್ರಾಮದಲ್ಲಿ ಬೆಳಗ್ಗಿನಿಂದ ಬಿಸಿಲಿನ ಪ್ರಮಾಣ ಹೆಚ್ಚಾಗಿತ್ತು. ಮಧ್ಯಾಹ್ನದ ವೇಳೆಗೆ ವಾತಾವರಣ ತಂಪಾಗಿ, ಮಳೆಯ ಸಿಡಿಲಿನ ಅಬ್ಬರ ಜೋರಾಗಿತ್ತು. ಕೆಲ ದಿನಗಳ ಹಿಂದೆ ಮೂವರು ಕುರಿಗಾಹಿಗಳು ಇದೇ ಗ್ರಾಮದಲ್ಲಿ ಸಿಡಿಲಿಗೆ ಬಲಿಯಾಗಿದ್ದರು. ಈಗ ಮೇಕೆಗಳು ಬಲಿಯಾಗಿವೆ. ಕುರಿಗಾಯಿಗೆ ನಷ್ಟದ ಪರಿಹಾರವನ್ನು ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಿಡಿಲು ಬಡಿದು ಎತ್ತು ಸಾವು:
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ನವಲಿ ಗ್ರಾಮದಲ್ಲಿ ಇಂದು ಸಂಜೆ ಗದ್ದೆಗೆ ಹೋದ ಎತ್ತಿಗೆ ಸಿಡಿಲು ಬಡಿದು ಮೃತಪಟ್ಟಿದೆ. ಈ ಎತ್ತು ರೈತ ನಾಗರಾಜ ಎಂಬುವರಿಗೆ ಸೇರಿದ್ದಾಗಿದ್ದು, ರೈತನ ಕುಟುಂಬಕ್ಕೆ ಆಧಾರ ಸ್ತಂಭವಾಗಿತ್ತು. ಎತ್ತು ಕಳೆದುಕೊಂಡ ರೈತ ಕಂಗಾಲಾಗಿದ್ದಾನೆ.