ಹೊಸಪೇಟೆ: ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಕುರಿತು ಬಹಿರಂಗ ಚರ್ಚೆಗೆ ಬಿಡದೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು ಎಂದು ಆಗ್ರಹಿಸಿ ಬಂಜಾರ ಸಮಾಜ, ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ, ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ವತಿಯಿಂದ ಸಚಿವ ಆನಂದ್ ಸಿಂಗ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕದಲ್ಲಿನ ಪ.ಜಾತಿ, ಪಂಗಡಗಳ ಐಕ್ಯತೆ ಕಾಪಾಡಬೇಕು. ಪರಿಶಿಷ್ಟ ಜಾತಿ ಪಟ್ಟಿಯಿಂದ ಲಂಬಾಣಿ, ಬೋವಿ, ಕೊರಚ, ಕೊರಮ ಜಾತಿಗಳನ್ನು ತೆಗೆದು ಹಾಕಬೇಕು ಎಂದು ಹೇಳುತ್ತಿದ್ದಾರೆ. ಈ ಕುರಿತು ಅನಗತ್ಯ ಚರ್ಚೆಗಳನ್ನು ಮಾಡಬಾರದು. ಕೆಲವರು ನಮ್ಮನ್ನು ಒಡೆದಾಳಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸಚಿವರ ಆಪ್ತ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮುಖಂಡರಾದ ಕೃಷ್ಣಾ ನಾಯ್ಕ, ತೇಜಸ್ವಿ ನಾಯ್ಕ, ಮುರುಳೀಧರ್ ನಾಯ್ಕ, ಡಿ.ಸುಮಾಬಾಯಿ, ವೆಂಕಟೇಶ್ ನಾಯ್ಕ ಇನ್ನಿತರರಿದ್ದರು.