ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿನ ಸ್ಮಶಾನ ಕಾರ್ಮಿಕರಿಗೆ ಕೋವಿಡ್ ಸುರಕ್ಷತೆಯೇ ಇಲ್ಲದಂತಾಗಿದೆ. ಉಭಯ ಜಿಲ್ಲೆಗಳಲ್ಲಿನ ಮಸಣ ಕಾರ್ಮಿಕರು ಮಹಾಮಾರಿ ಕೋವಿಡ್ಗೆ ಬಲಿಯಾಗಿದ್ದ ಮೃತದೇಹಗಳನ್ನ ಭೂಮಿಯಲ್ಲಿ ಹೂಳುವ ವೇಳೆಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳದಿರುವುದು ಬೆಳಕಿಗೆ ಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಮಹಾಮಾರಿ ಕೋವಿಡ್ ಸೋಂಕು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಲಾಕ್ಡೌನ್ ಅನ್ನ ಜಾರಿಗೊಳಿಸಿದೆ. ಮದುವೆ ಸಂಭ್ರಮ, ಸಭೆ - ಸಮಾರಂಭಗಳಿಗೆ ಕಡಿವಾಣ ಹಾಕೋ ಮುಖೇನ ಕೋವಿಡ್ ಸೋಂಕಿನ ನಾಗಾಲೋಟಕ್ಕೆ ಕಡಿವಾಣ ಹಾಕಲು ಮುಂದಾಗಿದೆಯಾದ್ರೂ, ಬಳ್ಳಾರಿ ಜಿಲ್ಲಾಡಳಿತ ಮಸಣ ಕಾರ್ಮಿಕರಿಗೆ ಹ್ಯಾಂಡ್ ಗ್ಲೌಸ್, ಮಾಸ್ಕ್ ಹಾಗೂ ಸ್ಯಾನಿಟೈಸರ್ನ ಕನಿಷ್ಠ ವ್ಯವಸ್ಥೆಯನ್ನೂ ಮಾಡಿಲ್ಲ. ಹೀಗಾಗಿ, ಮಸಣ ಕಾರ್ಮಿಕರನ್ನ ರಕ್ಷಣೆ ಮಾಡೋದು ಯಾರೆಂಬ ಪ್ರಶ್ನೆಯೂ ಉದ್ಭವಿಸಿದೆ.
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಅಂದಾಜು 5 ರಿಂದ 6 ಸಾವಿರಕ್ಕೂ ಅಧಿಕ ಮಂದಿ ಮಸಣ ಕಾರ್ಮಿಕರು ಇದ್ದಾರೆ. ಪ್ರತಿಯೊಂದು ಗ್ರಾಮಗಳಲ್ಲಿ ಅಂದಾಜು 5-6 ಮಂದಿಯ ತಂಡ ಇರಲಿದೆ. ಉಭಯ ಜಿಲ್ಲೆಗಳ ಯಾವುದೇ ಗ್ರಾಮಗಳಲ್ಲಿ ಈ ಕೋವಿಡ್ ಸೋಂಕಿನಿಂದ ಮೃತಪಟ್ಟರೆ ಸಾಕು. ಆ ಮೃತದೇಹವನ್ನ ಗ್ರಾಮ ಹೊರವಲಯದ ರುದ್ರಭೂಮಿಗೆ ತರೋದು ಇಲ್ಲಿನ ವಾಡಿಕೆ. ಆದರೆ, ಮೃತ ದೇಹದ ಸುತ್ತಲೂ ನೂರಾರು ಮಂದಿ ಸೇರಿಕೊಳ್ಳುತ್ತಾರೆ. ಸಾಮಾಜಿಕ ಅಂತರವೇನು? ಆ ಮೃತದೇಹದಿಂದ ಕಾಯ್ದು ಕೊಂಡರೇ ಆ ಗುಂಪಿನೊಳಗಿನ ಸಾಮಾಜಿಕ ಅಂತರವೇ ಮಾಯ ಆಗಿರುತ್ತೆ. ಇದರಿಂದಲೂ ಕೂಡ ಸೋಂಕಿನ ತೀವ್ರತೆ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ. ಜಿಲ್ಲಾಡಳಿತ ಸಭೆ- ಸಮಾರಂಭಗಳಿಗೆ ಕಡಿವಾಣ ಹಾಕಿದಂತೆಯೇ ಮಸಣದಲ್ಲೂ ಕೂಡ ಸಾರ್ವಜನಿಕರ ಸಹಭಾಗಿತ್ವಕ್ಕೆ ಕಡಿವಾಣ ಹಾಕಬೇಕೆಂದು ಅಭಿನಯ ಕಲಾಕೇಂದ್ರದ ಮುಖ್ಯಸ್ಥ ಕೆ.ಜಗದೀಶ ಕೋರಿದ್ದಾರೆ.
ಇನ್ನು ಸ್ಮಶಾನ ಕಾರ್ಮಿಕರು ಕೋವಿಡ್ ಮೃತ ದೇಹಗಳನ್ನ ಹೂತಿಡುವಾಗ ಯಾವುದೇ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಲು ಜಿಲ್ಲಾಡಳಿತವು ಅಗತ್ಯ ಕೋವಿಡ್ ಪರಿಕರಗಳನ್ನ ಪೂರೈಕೆ ಮಾಡಿಲ್ಲ. ಹೀಗಾಗಿ, ಮಸಣ ಕಾರ್ಮಿಕರಿಗೆ ಏನಾದರೂ ಹೆಚ್ಚು- ಕಡಿಮೆಯಾದರೆ ಯಾರು ಜವಾಬ್ದಾರರು ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಮಸಣ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಅಗಸರ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ ವಿಸ್ತರಿಸುವುದೇ ಆದರೆ, ಅದು 'ಜನಹಿತದ ಲಾಕ್ಡೌನ್' ಆಗಿರಲಿ: ಹೆಚ್ಡಿಕೆ ಸಲಹೆ