ಬಳ್ಳಾರಿ: ನೂತನ ವಿಜಯನಗರ ಜಿಲ್ಲೆ ಘೋಷಣೆ ವಿಚಾರವಾಗಿ ನನ್ನ ಕ್ಷೇತ್ರದ ಜನ ಇಷ್ಟಪಟ್ರೆ ಈಗಲೇ ರಾಜೀನಾಮೆ ನೀಡೋದಾಗಿ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ರಾಜಕೀಯದಲ್ಲಿ ಸಂಚಲನ ಮೂಡಿಸುವ ಹೇಳಿಕೆ ನೀಡಿದ್ದಾರೆ.
ನಗರದಲ್ಲಿಂದು ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರದ ಜನರು ಜಿಲ್ಲೆ ವಿಭಜನೆ ವಿಚಾರವಾಗಿ ರಾಜೀನಾಮೆ ನೀಡಿ ಅಂದ್ರೆ 30 ಸೆಕೆಂಡ್ಗಳಲ್ಲೇ ನೀಡುವೆ ಎಂದಿದ್ದಾರೆ. ಈ ಜಿಲ್ಲೆಯ ವಿಭಜನೆ ಮಾಡೋ ವಿಚಾರವಾಗಿ ನನಗೆ ಪಶ್ಚಿಮ ತಾಲೂಕುಗಳ ಜನರು ಫೋನ್ ಮಾಡಿ ಮಾತನಾಡಿದ್ದಾರೆ. ಯಾಕೆ ವಿಭಜನೆ ಮಾಡ್ತಾರೆ ಅಂತ ಗೋಳು ಹೇಳಿಕೊಂಡಿದ್ದಾರೆ. ಸಿಎಂ ಯಡಿಯೂರಪ್ಪ ಇದ್ದಾರೆ. ನಿಮ್ಮದೇ ಸರ್ಕಾರ ಇದೆ. ಹಣ ತಂದು ಅಭಿವೃದ್ಧಿ ಮಾಡಬಹುದೆಂದು ಕೇಳುತ್ತಿದ್ದಾರೆ. ಜಿಲ್ಲೆ ವಿಭಜನೆ ವಿಚಾರವಾಗಿ ನಾನು ಆನಂದ ಸಿಂಗ್ ಅವರ ಮನವೊಲಿಸುವೆ. ಜಿಲ್ಲಾ ಕೇಂದ್ರದ ಕಚೇರಿಗಳು ಬೇಕಾದ್ರೆ ಹೊಸಪೇಟೆಗೆ ಶಿಫ್ಟ್ ಆಗಲಿ. ಆದ್ರೆ ಜಿಲ್ಲೆಯನ್ನು ಒಡೆಯೋದು ಬೇಡ ಅಂತ ಮನವಿ ಮಾಡುವೆ ಎಂದರು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಬಳ್ಳಾರಿ ಜಿಲ್ಲೆಗೆ ಸೇರಿಸೋದು ಬೇಡ. ಈ ಬಗ್ಗೆ ನಾನು ಶ್ರೀ ರಾಮುಲು ಅವರ ಮನವೊಲಿಸುವೆ, ನಾಳೆ ನೆರೆಯ ಆಂಧ್ರಪ್ರದೇಶದ ನಾನಾ ತಾಲೂಕುಗಳು ಬರುತ್ತವೆ. ಚಳ್ಳಕೆರೆನೂ ಕೇಳ್ತಾರೆ. ಹಾಗೆ ಸೇರಿಸುತ್ತಾ ಹೋದ್ರೆ 371 ಜೆ ಸೌಲಭ್ಯದಿಂದ ನಮ್ಮ ಭಾಗದ ಮಕ್ಕಳು ವಂಚಿತರಾಗ್ತಾರೆ. ಯಾವುದೇ ಕಾರಣಕ್ಕೂ ಮೊಳಕಾಲ್ಮೂರು ಬಳ್ಳಾರಿಗೆ ಸೇರಿಸೋದು ಬೇಡ ಎಂದು ಸೋಮಶೇಖರ ರೆಡ್ಡಿ ಒತ್ತಾಯಿಸಿದರು.
ಲವ್ ಜಿಹಾದ್ ಬಗ್ಗೆ ಮಾತನಾಡಿದ ಅವರು, ಲವ್ ಜಿಹಾದ್ ಬೇಡವೇ ಬೇಡ. ಅದು ಹಿಂದೂ ಧರ್ಮಕ್ಕೆ ಮಾರಕ, ಅದರಿಂದ ಸಮಸ್ಯೆಯಾಗುತ್ತದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಿರಿಯರು ಕ್ರಾಸ್ ಬ್ರೀಡ್ ವಿಚಾರವಾಗಿ ಯಾಕೆ ಹಾಗೆ ಮಾತನಾಡಿದರೋ ಗೊತ್ತಿಲ್ಲ ಎಂದರು. ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು. ಬಹಳ ದಿನಗಳ ಬೇಡಿಕೆ ಇದಾಗಿದ್ದು, ಅದನ್ನು ರಾಜ್ಯ ಸರ್ಕಾರ ಈಡೇರಿಸಬೇಕೆಂದು ಅವರು ತಿಳಿಸಿದರು.