ಹೊಸಪೇಟೆ: ಸಾರಿಗೆ ನೌಕರರ ಮುಷ್ಕರದಿಂದ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (ಎನ್ಇಕೆಆರ್ಟಿಸಿ) ಹೊಸಪೇಟೆ ವಿಭಾಗಕ್ಕೆ ಅಂದಾಜು 15 ಲಕ್ಷ ರೂ. ನಷ್ಟವಾಗಿದೆ.
ವಿಭಾಗವು ಈಗಾಗಲೇ ಕೊರೊನಾ ಕಾರಣದಿಂದ ನಷ್ಟ ಅನುಭವಿಸಿತ್ತು. ಇದೀಗ ಸ್ವಲ್ಪ ಚೇತರಿಸಿಕೊಳ್ಳುತ್ತಿರುವ ಹೊತ್ತಿಗೆ ಮುಷ್ಕರ ನಡೆಸುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದನ್ನೂ ಓದಿ: ಕೊರೊನಾ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಗೆ ಬದ್ಧರಾಗಿದ್ದೇವೆ: ಸಾರಿಗೆ ಸಚಿವ ಸವದಿ
ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ, ಕೂಡ್ಲಿಗಿ, ಸಂಡೂರು ಹೊಸಪೇಟೆ ವಿಭಾಗದಲ್ಲಿ ಬರುತ್ತವೆ. ಪ್ರತಿದಿನ 226 ಬಸ್ಗಳು ಈ ವಿಭಾಗದಿಂದ ಸಂಚರಿಸುತ್ತವೆ. ಈ ಪೈಕಿ ಇಂದು 184 ಬಸ್ಗಳು ಮಾತ್ರ ರಸ್ತೆಗಿಳಿದಿವೆ. 40 ಬಸ್ ಸಂಚಾರ ನಡೆಸಿಲ್ಲ. ಹರಪನಹಳ್ಳಿ ಘಟಕದಿಂದ ಒಟ್ಟು 33 ಬಸ್ಗಳು ಹೋಗುತ್ತವೆ. ಈ ಪೈಕಿ ಇಂದು ನಾಲ್ಕು ಬಸ್ಗಳು ಮಾತ್ರ ಸಂಚರಿಸಿವೆ, ಉಳಿದ 29 ಬಸ್ಗಳು ನಿಂತಿವೆ. ಇದು ಹೊಸಪೇಟೆ ವಿಭಾಗಕ್ಕೆ ದೊಡ್ಡ ಹೊಡೆತ ನೀಡಿದೆ.
ಪ್ರಯಾಣಿಕರ ಪರದಾಟ: ಇಂದು ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಹೊಸಪೇಟೆ ವಿಭಾಗದಲ್ಲಿ ಮಾತ್ರ ಬಸ್ಗಳು ಓಡಾಟ ನಡೆಸಿವೆ. ಬಳ್ಳಾರಿ, ಕೊಪ್ಪಳ, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ಇತರ ವಿಭಾಗಗಳ ಬಸ್ಗಳು ರಸ್ತೆಗಳಿದಿಲ್ಲ. ಹೀಗಾಗಿ ಪ್ರಯಾಣಿಕರು ಗಂಟೆಗಟ್ಟಲೆ ಬಸ್ ನಿಲ್ದಾಣದಲ್ಲೇ ಕಾಯುವಂತಾಯಿತು.
ಈಟಿವಿ ಭಾರತದೊಂದಿಗೆ ಹೊಸಪೇಟೆ ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಮಾತನಾಡಿ, ದಿಢೀರನೆ ಮುಷ್ಕರ ಮಾಡಿದ್ದರಿಂದ ವಿಭಾಗ ನಷ್ಟ ಅನುಭವಿಸುವಂತಾಗಿದೆ. ನೌಕರರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಕೆಲ ನೌಕಕರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದು ಸಮಸ್ಯೆ ಬಿಗಡಾಯಿಸುವಂತೆ ಮಾಡಿದೆ ಎಂದು ಹೇಳಿದರು.