ಹೊಸಪೇಟೆ (ವಿಜಯನಗರ): ಕೋವಿಡ್ ಲಾಕ್ಡೌನ್ನಿಂದ ನಗರಸಭೆ ಆದಾಯಕ್ಕೆ ಹೊಡೆತ ಬಿದ್ದಿದೆ. ಕೊರೊನಾದಿಂದ ಕಳೆದ ವರ್ಷ ಹಾಗೂ ಈ ವರ್ಷದಿಂದ ನಗರಸಭೆಯ ಆದಾಯ ಇಲ್ಲದಂತಾಗಿದೆ. ಇದರಿಂದಾಗಿ ನಗರಸಭೆ ನಾನಾ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಹೊಸಪೇಟೆ ನಗರಸಭೆಯ ವ್ಯಾಪ್ತಿಯಲ್ಲಿ 35 ವಾರ್ಡ್ಗಳು ಬರುತ್ತವೆ. ಇವುಗಳ ನಿರ್ವಹಣೆಗಾಗಿ ನಗರಸಭೆಗೆ ಸಾಕಷ್ಟು ವೆಚ್ಚ ತಗಲುತ್ತದೆ. ಜನರು ಪಾವತಿಸುವ ತೆರಿಗೆ ಆದಾಯವನ್ನು ನಗರಸಭೆ ನೆಚ್ಚಿಕೊಂಡಿದೆ. ಈಗ ಕೋವಿಡ್ನಿಂದ ಸಂಕಷ್ಟಕ್ಕೆ ಒಳಗಾದ ಜನರು ತೆರಿಗೆ ಪಾವತಿಸಲು ಮುಂದೆ ಬರುತ್ತಿಲ್ಲ. ಇದು ನಗರಸಭೆಯ ವೆಚ್ಚಗಳಿಗೆ ತೊಡಕುಂಟಾಗಿದೆ.
ನಗರಸಭೆ ನಿರ್ವಹಣೆಗೆ ಸಂಕಷ್ಟ : ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹವಾಗಿಲ್ಲ. ಹಾಗಾಗಿ, ನೀರು ಸರಬರಾಜು, ವಿದ್ಯುತ್ ಬಿಲ್, ಸಿಬ್ಬಂದಿ ವೇತನ ನೀಡುವುದಕ್ಕೆ ಹೆಣಗಾಡುವ ಸ್ಥಿತಿ ಎದುರಾಗಿದೆ. ಸಾರ್ವಜನಿಕರು ನಿಯಮಿತ ಸಮಯದಲ್ಲಿ ತೆರಿಗೆಯನ್ನು ಪಾವತಿಸಬೇಕು ಎಂಬುದು ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಅವರ ಮಾತಾಗಿದೆ.
ಎಷ್ಟು ಆದಾಯ ಕುಸಿತ?: ನಗರಸಭೆಗೆ ಏಪ್ರಿಲ್, ಮೇ ತಿಂಗಳಿನಲ್ಲಿ ಸರಾಸರಿ 2 ಕೋಟಿ ರೂ. ತೆರಿಗೆ ಆದಾಯ ಹರಿದು ಬರುತ್ತಿತ್ತು. ಆದರೆ, ಈಗ 75 ಲಕ್ಷ ರೂ. ಅಷ್ಟೇ ಬಂದಿದೆ. 1.25 ಕೋಟಿ ರೂ. ಆದಾಯ ಕುಂಠಿತವಾಗಿದೆ. ಇದರಿಂದ ಸಂಕಷ್ಟ ಎದುರಾಗಿದೆ.
ಹೊರಗುತ್ತಿಗೆ ನೌಕರರಿಗೆ ಕಷ್ಟ : ನಗರಸಭೆ ಖಾಯಂ ನೌಕರರಿಗೆ ವೇತನವನ್ನು ಪಾವತಿಸಲಾಗಿದೆ. ಆದರೆ, 100 ಜನ ಹೊರಗುತ್ತಿಗೆ ನೌಕರಿಗೆ ಎರಡು ತಿಂಗಳಿನ ವೇತನವನ್ನು ಪಾವತಿಸಿಲ್ಲ. ಇದರಿಂದ ಹೊರಗುತ್ತಿಗೆ ನೌಕರರು ಕಷ್ಟ ಅನುಭವಿಸಬೇಕಾಗಿದೆ.
ಆದಾಯ ಮೂಲಗಳು ಯಾವವು? : ಹೊಸಪೇಟೆ ನಗರಸಭೆಯ ವ್ಯಾಪ್ತಿಯಲ್ಲಿ 60 ಸಾವಿರ ಆಸ್ತಿಗಳಿವೆ. ಈ ಪೈಕಿ 45 ಸಾವಿರ ಕಟ್ಟಡಗಳಿವೆ. 10 ರಿಂದ 15 ಸಾವಿರ ಖಾಲಿ ನಿವೇಶನಗಳಿವೆ. ಈ ಬಾರಿ ಶೇ.10 ರಿಂದ 15ರಷ್ಟು ಮಾತ್ರ ಜನರು ತೆರಿಗೆ ಪಾವತಿಸಿದ್ದಾರೆ. ಇನ್ನು, ಶೇ.80ರಷ್ಟು ಜನರು ತೆರಿಗೆ ಪಾವತಿಸಬೇಕಾಗಿದೆ.
ಈಟಿವಿ ಭಾರತ್ದೊಂದಿಗೆ ನಗರಸಭೆಯ ಪೌರಾಯುಕ್ತ ಮನ್ಸೂರ್ ಅಲಿ ಅವರು ಮಾತನಾಡಿ, ಕೋವಿಡ್ನಿಂದ ನಗರಸಭೆ ಆದಾಯಕ್ಕೆ ಹೊಡೆತ ಬಿದ್ದಿದೆ. ಇದರಿಂದ ಹೊರಗುತ್ತಿಗೆ ನೌಕರರ ಎರಡು ತಿಂಗಳಿನ ಸಂಬಳವನ್ನು ನೀಡಿಲ್ಲ ಎಂದು ಹೇಳಿದರು.
ಓದಿ: ಅವಧಿಪೂರ್ವ ಜನಿಸಿದ ಶಿಶು ಬದುಕೋದೆ ಡೌಟ್ ಅಂದರು.. ಜಿಲ್ಲಾಸ್ಪತ್ರೆ ವೈದ್ಯರು ಅದನ್ನ ಸುಳ್ಳಾಗಿಸಿದರು..