ಹೊಸಪೇಟೆ: ಉತ್ತರ ಕರ್ನಾಟಕ ಭಾಗವು ಪ್ರಾಣಿ ಪಕ್ಷಿಗಳು ವಾಸಿಸಲು ಸೂಕ್ತ ತಾಣವಾಗಿದ್ದು, ವನ್ಯಜೀವಿಗಳನ್ನು ಕಾಪಾಡುವತ್ತ ಜನರು ಹೆಜ್ಜೆ ಇಡಬೇಕು ಹಾಗೂ ಕಮಲಾಪುರದಲ್ಲಿ ನಿರ್ಮಿಸಲಾದ ಮೃಗಾಲಯದ ಬಗ್ಗೆ ಜನ ಸಾಮಾನ್ಯರ ಭಾಷೆಯಲ್ಲಿಯೇ ಸೂಕ್ತ ಮಾಹಿತಿ ನೀಡಬೇಕು ಎಂದು ಐಎಫ್ಎಸ್ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರ್ನಾಟಕ ಮೃಗಾಲಯ ಪ್ರಾಧಿಕಾರ ಮೈಸೂರಿನ ಬಿ.ಪಿ.ರವಿ ಹೇಳಿದರು.
ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜಿಯೋಜಿಕಲ್ ಪಾರ್ಕ್ ಕರಡಿಧಾಮ ಸಭಾಂಗಣದಲ್ಲಿ ಉತ್ತರ ಕರ್ನಾಟಕ ವನ್ಯ ಜೀವಿಗಳ ಸಂರಕ್ಷಣೆ ಕಾರ್ಯಗಾರದಲ್ಲಿ ಮಾತನಾಡಿದ ಅವರು, ನಮ್ಮ ದೇಶವು ಸಂಪತ್ತಿನ ದೇಶವಾಗಿದೆ, ಕಾಡುಗಳಲ್ಲಿರುವ ಪ್ರಾಣಿಗಳನ್ನು ಕಾಪಾಡುವುದು ನಮ್ಮೆಲ್ಲರ ಮುಖ್ಯ ಕರ್ತವ್ಯ. ವನ್ಯ ಜೀವಿಗಳ ಬಗ್ಗೆ ಸೂಕ್ತ ಮಾಹಿತಿ ಪಡೆದು ಅವಗಳನ್ನು ಕಾಪಾಡುವತ್ತ ಶ್ರಮ ವಹಿಸಬೇಕು ಎಂದು ಕರೆ ನೀಡಿದರು.
ಪ್ರತಿಯೊಬ್ಬ ವ್ಯಕ್ತಿಯು ಪ್ರಾಣಿ ಮತ್ತು ಪಕ್ಷಿಗಳನ್ನು ಸಾಕಬೇಕು. ಅವುಗಳನ್ನು ಯಾರು ಮಾಂಸಕ್ಕಾಗಿ ಬೇಟೆಯಾಡಬಾರದು. ಸರ್ಕಾರ ಪ್ರಾಣಿ ಸಂಗ್ರಹಾಲಯಗಳನ್ನು ಆಕರ್ಷಣೆಯಾಗುವಂತೆ ನಿರ್ಮಾಣ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಇನ್ನು ಈ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿವಿ ಕುಲಪತಿ ಡಾ.ಸ.ಚಿ ರಮೇಶ ಮಾತನಾಡಿ, ಸರ್ಕಾರವು ವನ್ಯ ಜೀವಿಗಳ ಬಗ್ಗೆ ಪಠ್ಯ- ಪುಸ್ತಕಗಳನ್ನು ರಚಿಸಬೇಕು ಹಾಗೂ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ವನ್ಯ ಜೀವಿಗಳ ಉಳಿವಿಗಾಗಿ ಶ್ರಮಿಸಬೇಕಿದೆ ಎಂದು ಅಭಿಪ್ರಾಯ ಪಟ್ಟರು.