ಬಳ್ಳಾರಿ: ಜಿಲ್ಲೆಯ ತೋರಣಗಲ್ಲಿನಲ್ಲಿರುವ ಜೆಎಸ್ಡಬ್ಲ್ಯು ಸಮೂಹದ ಜಿಂದಾಲ್ ವಿಜಯನಗರ ಏರ್ಪೋರ್ಟ್ನಿಂದ ಬೆಂಗಳೂರು ಹಾಗೂ ಹೈದರಾಬಾದ್ಗೆ ವಿಮಾನ ಸೇವೆಗೆ ಶನಿವಾರ ಚಾಲನೆ ನೀಡಲಾಯಿತು. ಅಲಯನ್ಸ್ ಏರ್ ಸಂಸ್ಥೆಯ ವಿಮಾನಗಳು ಸೇವೆ ಒದಗಿಸಲಿದೆ.
ಸಂಡೂರು ಶಾಸಕ ಇ ತುಕಾರಾಂ, ಜಿಲ್ಲಾಧಿಕಾರಿ ಪವಕುಮಾರ್, ಮಲಪಾಟಿ, ಜೆ.ಎಸ್.ಡಬ್ಲ್ಯೂ, ಸೀಲ್ ವಿಜಯನಗರ ಮತ್ತು ಸೇಲಂ ವರ್ಕ್, ಜೊತೆಗೆ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು, ಅಲಾಯನ್ಸ್ ಏರ್ ಅಧಿಕಾರಿಗಳು, ಬಳ್ಳಾರಿ ಜಿಲ್ಲಾಡಳಿತದ ತಂಡ ಮತ್ತು ಜೆಎಸ್ಡಬ್ಲ್ಯೂ ಸಮೂಹದ ಇತರ ಅಧಿಕಾರಿಗಳ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ವಿಮಾನಯಾನಕ್ಕೆ ಚಾಲನೆ ನೀಡಿದರು.
ಪ್ರಧಾನಮಂತ್ರಿ ಅವರ ಉಡಾನ್ (ಉಡೇ ದೇಶ ಕಾ ಆಮ್ ನಾಗರಿಕ್) ಯೋಜನೆಯು ಭಾರತದ ಜನರಿಗೆ ಅನುಕೂಲಕರ ಪ್ರಯಾಣದ ಆಯ್ಕೆ ಎಂಬುದನ್ನು ಸಾಬೀತುಪಡಿಸಿದೆ. ಈ ಮಹತ್ವಾಕಾಂಕ್ಷೆಯ ಉಡಾನ್ ಯೋಜನೆಯ ಹಿಂದಿನ ಉದ್ದೇಶಗಳನ್ನು ಅರಿತುಕೊಂಡ ನಂತರ ಜೆ.ಎಸ್.ಪಿ.ಕೆ. ಡಬ್ಲ್ಯೂ ಸಮೂಹದ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣವು ನಾಗರಿಕ ವಿಮಾನಯಾನ ಸಚಿವಾಲಯದ ಉಡಾನ್ ಉಪಕ್ರಮದ ಪ್ರಾರಂಭದ ಸಮಯದಲ್ಲಿ ವಿಮಾನ ಕಾರ್ಯಾಚರಣೆಗಳಿಗೆ ಅವಕಾಶ ಕಲ್ಪಿಸಿದ ದೇಶದ ಮೊದಲ ಖಾಸಗಿ ವಿಮಾನ ನಿಲ್ದಾಣವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಈ ವಿಮಾನ ನಿಲ್ದಾಣವೂ ನಿಭಾಯಿಸಿದೆ.
ಅಲಯನ್ಸ್ ಏರ್, ಪ್ರಾದೇಶಿಕ ಸಂಪರ್ಕ ಯೋಜನೆಯಡಿ (RCS) ವಿದ್ಯಾನಗರದಿಂದ (ಬಳಾರಿ ಮತ್ತು ವಿಜಯನಗರ ಜಿಲ್ಲೆಗಳು) ಹೈದರಾಬಾದ್ ಮತ್ತು ಬೆಂಗಳೂರಿಗೆ ಸಂಪರ್ಕಿಸುವ ಏಕೈಕ ವಿಮಾನಯಾನ ಸಂಸ್ಥೆಯಾಗಿದೆ. ಭಾರತ ಸರ್ಕಾರದ ಪ್ರಮುಖ ಯೋಜನೆಯಾದ ಉಡಾನ್ನಲ್ಲಿ ಉತ್ಸುಕವಾಗಿ ಭಾಗವಹಿಸಿದೆ. ಈ ಭಾಗದ ಜನತೆಗೆ ಸಹಾಯವಾಗುವುದಲ್ಲದೇ, ಎಲ್ಲ ಯಾತ್ರಿಕರಿಗೆ ಕೈಗೆಟುಕುವ ದರದಲ್ಲಿ ವಿಮಾನಯಾನ ಸಂಪರ್ಕವನ್ನು ಒದಗಿಸುತ್ತದೆ.
ಜೆ.ಎಸ್.ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಹಾಗೂ ಸುತ್ತಲಿನ ಪ್ರದೇಶದಲ್ಲಿ ಹಲವಾರು ಉಕ್ಕು ಮತ್ತು ಗಣಿಗಾರಿಕೆ ಕಂಪನಿಗಳಿರುವುದರಿಂದ ಬಳ್ಳಾರಿ ಜಿಲ್ಲೆಯು ಪ್ರಮುಖ ವ್ಯಾಪಾರೋದ್ಯಮ ಮತ್ತು ಪ್ರವಾಸಿ ತಾಣವಾಗಿದೆ. ಅದಲ್ಲದೇ, ಈ ಪ್ರದೇಶವು, ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ವಿಜಯನಗರ ಸಾಮ್ರಾಜ್ಯದ ಕೇಂದ್ರಬಿಂದುವಾದ ಹಂಪಿಯನ್ನು ಸಹ ಹೊಂದಿದೆ.
ಬಳ್ಳಾರಿ ಜಿಲ್ಲೆಯ ಸುತ್ತಮುತ್ತಲಿನಲ್ಲಿ ದರೋಜಿ ಕರಡಿ ಧಾಮ, ಇಂಟರ್ಪ್ರಿಟೇಶನ್ ಸೆಂಟರ್, ಸಂಡೂರ್ ಕಬ್ಬಿಣದ ಅದಿರು ಗಣಿ ಮತ್ತು ಬಳ್ಳಾರಿ ಕೋಟೆಯಂತಹ ಹಲವಾರು ಪ್ರವಾಸ ತಾಣಗಳಿವೆ. ಹೈದರಾಬಾದ್ನಿಂದ ಹಂಪಿ, ಸಂಡೂರು, ಬಳ್ಳಾರಿ ಮತ್ತು ಇತರ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ಹೊಸ ವಾಯು ಮಾರ್ಗದಿಂದ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಉದ್ಯಮಿಗಳಿಗೆ ಅನುಕೂಲವಾಗಲಿದೆ.
ಸಂಡೂರು ಶಾಸಕ ಇ ತುಕಾರಾಂ, ಜಿಲ್ಲಾಧಿಕಾರಿ ಪವನ್ ಕುಮಾರ್, ಮಲಪಾಟಿ, ಅವರು ಜೆ.ಎಸ್.ಡಬ್ಲ್ಯೂ, ತನ್ನ ಖಾಸಗಿ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆಯ ಸಹಪಾಲುದಾರನಾಗಿಸಿದ್ದಕ್ಕೆ ಶ್ಲಾಘಿಸಿದರು. ಹೈದರಾಬಾದ್ ಮತ್ತು ಬೆಂಗಳೂರಿಗೆ ಪ್ರಯಾಣಿಸಲು ಇದು ಅನುಕೂಲವಾಗುವುದಲ್ಲದೇ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದರು.
ಇದನ್ನೂ ಓದಿ: ಇತಿಹಾಸ ಬರೆದ ಇಸ್ರೋ: 36 ಉಪಗ್ರಹಗಳ ಕಕ್ಷೆ ಸೇರಿಸಿದ ಬಹುಭಾರದ LVM3-M2 ರಾಕೆಟ್