ಬಳ್ಳಾರಿ: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೊರೊನಾ ವೈರಸ್ ಸಂಭಂದಿಸಿದಂತೆ ಎನ್.ಜಿ.ಒ ಮತ್ತು ಸಂಘ ಸಂಸ್ಥೆಗಳೊಂದಿಗೆ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ ಹೊರದೇಶಗಳಿಗೆ ಹೋಗಿ ಬಂದಿದ್ದರೆ ತಕ್ಷಣ ಮಾಹಿತಿ ನೀಡಿ ಚಿಕಿತ್ಸೆ ಹಾಗೂ ತಪಾಸಣೆಗೆ ಮಾಡಿಸಿಕೊಂಡು ಕೊರೊನಾ ವೈರಸ್ ತಡೆಗಟ್ಟಲು ಸಹಕರಿಸಬೇಕು. ನಡೆಯುತ್ತದೆ ಬಿಡಿ.. ಎಂದು ಬೇಜವಾಬ್ದಾರಿಯಿಂದ ನಡೆದುಕೊಂಡು ಎಲ್ಲೆಂದರಲ್ಲಿ ಸಂಚರಿಸಿದ್ದು ಕಂಡುಬಂದಲ್ಲಿ ಬೇರೆಯವರಿಗೆ ಇದರಿಂದ ಸಮಸ್ಯೆಯಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಸಾಮಾಜಿಕ ಹೊಣೆಗಾರಿಕೆ ಮರೆತು ಆ ರೀತಿ ವರ್ತಿಸಿದರೆ ಅಂತವರ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂಬುದನ್ನು ಮರೆಯದಿರಿ ಎಂದರು.
ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ಮದುವೆ, ಸಭೆ-ಸಮಾರಂಭಗಳಲ್ಲಿ ಅತ್ಯಂತ ಕಡಿಮೆ ಜನರನ್ನು ಸೇರಿಸುವ ನಿಟ್ಟಿನಲ್ಲಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಜಾತ್ರೆಗಳನ್ನು ರದ್ದು ಪಡಿಸಲಾಗಿದೆ. ಕೊರೊನಾ ವೈರಸ್ ಜಿಲ್ಲೆಯಲ್ಲಿ ವ್ಯಾಪಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಈಗಾಗಲೇ ಕೈಗೊಂಡಿದೆ ಎಂದು ತಿಳಿಸಿದರು.
'ಸುಳ್ಳು ಸುದ್ದಿ ಹಬ್ಬಿಸಬೇಡಿ'
ಕೊರೊನಾ ವೈರಸ್ಗೆ ಔಷಧವಿದೆ ಎಂಬುದೂ ಸೇರಿದಂತೆ ನಾನಾ ಸುಳ್ಳು ಸುದ್ದಿಗಳನ್ನು ವಾಟ್ಸ್ ಆ್ಯಪ್ಗಳಲ್ಲಿ ಹರಿಬಿಡಲಾಗುತ್ತಿದೆ. ದಯವಿಟ್ಟು ಇವನ್ನು ಹಬ್ಬಿಸಬೇಡಿ. ಜಿಲ್ಲೆಯಲ್ಲಿ ಯಾರಾದರೂ ಈ ರೀತಿ ಮಾಡುವುದು ತಿಳಿಸಿದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೊರೊನಾ ವೈರಸ್ಗೆ ತಪಾಸಣೆ ಮತ್ತು ಚಿಕಿತ್ಸೆಗಾಗಿ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್, ವಿಮ್ಸ್ನಲ್ಲಿ 10 ಬೆಡ್ ಮತ್ತು ಹೊಸಪೇಟೆಯಲ್ಲಿ 3 ಬೆಡ್ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಖಾಸಗಿ ಆಸ್ಪತ್ರೆಗಳನ್ನು, ಮೊರಾರ್ಜಿ ವಸತಿ ಶಾಲೆಗಳನ್ನು ಗುರುತಿಸಿ ರಿಸರ್ವ್ ಮಾಡಲಾಗಿದೆ. ಜಿಲ್ಲೆಯಲ್ಲಿರುವ ಎನ್ಜಿಒಗಳು ತಮ್ಮ ಸ್ವಯಂಸೇವಕರ ಪಟ್ಟಿ ಸಿದ್ದಪಡಿಸಿಟ್ಟುಕೊಳ್ಳಬೇಕು. ಅಗತ್ಯಬಿದ್ದಾಗ ಸೇವೆಗೆ ಸಿದ್ದರಿರಬೇಕು. ಕರಪತ್ರಗಳನ್ನು ಮುದ್ರಿಸಿ ವಿತರಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.