ಬಳ್ಳಾರಿ: ಕರ್ತವ್ಯ ನಿರ್ಲಕ್ಷ್ಯ ಮತ್ತು ಅಧಿಕಾರ ದುರುಪಯೋಗ ಆಧಾರದ ಮೇಲೆ ಗ್ರಾಮಲೆಕ್ಕಾಧಿಕಾರಿ, ದ್ವಿತೀಯ ಹಾಗೂ ಪ್ರಥಮ ಸಹಾಯಕ ದರ್ಜೆ ಸಹಾಯಕರನ್ನು ಸೇರಿದಂತೆ ಮೂವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಹಡಗಲಿ ತಾಲೂಕಿನ ಅಡವಿ ಮಲ್ಲನಕೇರಿ, ಗೋವಿಂದಪುರ ತಾಂಡಾ-01, ಹುಗಲೂರು, ಸೋಗಿ ಪ್ರಭಾರೆಯ ಗ್ರಾಮಲೆಕ್ಕಾಧಿಕಾರಿ ಶಂಭುಲಿಂಗ ಹಾಗೂ ಬಳ್ಳಾರಿ ತಾಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ನಾಗವೇಣಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಸರ್ಕಾರಿ ಸೇವೆಯಿಂದ ನಿಲಂಬನೆಗೊಳಿಸಿ ಆದೇಶಿಸಲಾಗಿದೆ.
ಸದರಿ ನೌಕರರು ನಿಲಂಬನಾ ಅವಧಿಯಲ್ಲಿ ಕೆಸಿಎಸ್ಆರ್ 1958ರ ನಿಯಮ 98ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಈ ಅಮಾನತು ಅವಧಿಯಲ್ಲಿ ಸಕ್ಷಮ ಅಧಿಕಾರಿಗಳ ಪರವಾನಗಿ ಪಡೆಯದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಅವರು ತಿಳಿಸಿದ್ದಾರೆ.
ಇನ್ನು ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದರ ಆಧಾರದ ಮೇರೆಗೆ ಸಿರಗುಪ್ಪ ತಾಲೂಕು ಕಚೇರಿ ಪ್ರಥಮದರ್ಜೆ ಸಹಾಯಕ ಮದ್ದಿಲೆಟ್ಟಿ ಅವರನ್ನು ಅಮಾನತುಗೊಳಿಸಿ ಡಿಸಿ ನಕುಲ್ ಅವರು ಆದೇಶ ಹೊರಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಅಮಾನತು ಅವಧಿಯಲ್ಲಿ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಮತ್ತು ಅಮಾನತು ಅವಧಿಯಲ್ಲಿ ನೌಕರರು ಸಕ್ಷಮ ಅಧಿಕಾರಿಗಳ ಪರವಾನಗಿ ಪಡೆಯದೇ ಕೇಂದ್ರಸ್ಥಾನ ಬಿಡತಕ್ಕದಲ್ಲ ಎಂದು ಆದೇಶಿಸಲಾಗಿದೆ.
ಮದ್ದಿಲೆಟ್ಟಿ ಅವರು ಸಿರಗುಪ್ಪ ತಾಲೂಕು ಕಚೇರಿ ಸಿರಿಗೇರಿ ಗ್ರಾಮದ ಸ.ನಂ.189(ಪೈಕಿ) ವಿಸ್ತೀರ್ಣ: 13.45 ಎಕರೆ ಸರ್ಕಾರಿ(ತೆಕ್ಕಲಕೋಟೆ) ಜಮೀನನ್ನು ಅನಧಿಕೃತವಾಗಿ ತೆಕ್ಕಲಕೋಟೆಪ್ಪ ದುರುಗಪ್ಪ ಸಿರಿಗೇರಿ ಗ್ರಾಮ ಇವರ ಹೆಸರಿಗೆ ಹಕ್ಕುಬದಲಾವಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆ ಅಮಾನತುಗೊಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.