ಬಳ್ಳಾರಿ: ವೈದ್ಯರು ಸಲ್ಲಿಸುತ್ತಿರುವ ಸೇವೆ ಅಮೋಘವಾಗಿದೆ. ಸಾವಿನ ಪ್ರಮಾಣ ದಿಢೀರ್ ಏರಿಕೆ ಆದ ಕಾರಣ ಸೋತಿದ್ದೇವೆ ಎಂಬ ನಿರಾಶೆ ಬೇಡ. ಕೊರೊನಾ ಸೊಂಕಿನಿಂದ ಆಸ್ಪತ್ರೆಗೆ ದಾಖಲಾಗುವ ಪ್ರತಿ ರೋಗಿಯೊಬ್ಬರ ವೈಯಕ್ತಿಕ ಕಾಳಜಿವಹಿಸಿ ಪರಿಣಾಮಕಾರಿ ಚಿಕಿತ್ಸೆ ನೀಡಬೇಕು. ಆ ಮೂಲಕ ಮರಣ ಪ್ರಮಾಣ ಕಡಿಮೆಗೊಳಿಸಲು ಮುಂದಾಗಬೇಕು ಎಂದು ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಆನಂದ್ ಸಿಂಗ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಕೋವಿಡ್ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೋಗಿಗಳ ಹತ್ತಿರ ಹಿರಿಯ ವೈದ್ಯರು ತೆರಳಿ ಚಿಕಿತ್ಸೆ ಕೊಡಬೇಕು. ಜಿಲ್ಲೆಯಲ್ಲಿ ಕೋವಿಡ್ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು. ಸರ್ಕಾರ ಸೂಚಿಸಿದ ನಿಯಮಾವಳಿಗಳನ್ನು ಕಡ್ಡಾಯವಾಗಿ ಜಿಲ್ಲೆಯ ಜನರು ಸ್ವಯಂ ಪ್ರೇರಿತವಾಗಿ ಪಾಲಿಸಬೇಕು. ಅಂದಾಗ ಮಾತ್ರ ಈ ಕೋವಿಡ್ ಹರಡುವುದನ್ನು ತಡೆಗಟ್ಟಲು ಸಾಧ್ಯ. ಸರ್ಕಾರ ಹಾಗೂ ಜಿಲ್ಲಾಡಳಿತ ತಮ್ಮ ಜೊತೆಗಿದೆ. ಯಾವುದೇ ರೀತಿಯ ತೊಂದರೆ, ವ್ಯವಸ್ಥೆ ಲೋಪ, ಹೇಳಿಕೊಳ್ಳಲಾಗದಿದ್ದ ಅಂಶಗಳಿದ್ದರೆ ಮುಕ್ತವಾಗಿ ಹಂಚಿಕೊಳ್ಳಿ. ಕೋವಿಡ್ ಚಿಕಿತ್ಸೆಗೆ ಬೇಕಾದ ಪರಿಕರಗಳು ಹಾಗೂ ಔಷಧಿಗಳು ಇನ್ನೂ ಅಗತ್ಯವಿದ್ದಲ್ಲಿ ಸಮರ್ಪಕವಾಗಿ ಒದಗಿಸಲಾಗುವುದು ಎಂದರು.
880 ಸೊಂಕಿತರು, 29 ಮಂದಿ ಮರಣ:
ಜಿಲ್ಲೆಯಲ್ಲಿ ಇಂದಿನ 107 ಕೊರೊನಾ ಪಾಸಿಟಿವ್ ಪ್ರಕರಣ ಸೇರಿದಂತೆ ಒಟ್ಟು ಸೋಂಕಿತರ ಸಂಖ್ಯೆ 880ಕ್ಕೆ ಏರಿದೆ. ದೀರ್ಘ ಕಾಯಿಲೆಗಳಿಂದ ಬಳಲುತ್ತಿದ್ದ, 29 ಜನರು ಸರಿಯಾದ ಸಮಯಕ್ಕೆ ಬಾರದೇ ತಡವಾಗಿ ಬಂದು ಸಾವನ್ನಪ್ಪಿದ್ದಾರೆ. 409ಜನರು ಡಿಸ್ಚಾರ್ಜ್ ಆಗಿದ್ದು, 442 ಸಕ್ರಿಯ ಪ್ರಕರಣಗಳಿವೆ ಎಂದು ಡಿಎಚ್ಒ ಡಾ.ಜನಾರ್ದನ ಅವರು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 16,678 ಸ್ವಾಬ್ ಸಂಗ್ರಹಿಸಿ ಪರೀಕ್ಷಿಸಲಾಗಿತ್ತು. ಅವರಲ್ಲಿ 880 ಜನರಿಗೆ ಪಾಸಿಟಿವ್ ಬಂದಿದೆ. ಬಳ್ಳಾರಿ-12, ಸಂಡೂರು-03, ಸಿರಗುಪ್ಪ-02, ಹೊಸಪೇಟೆ-05, ಅದೋನಿ-03, ಗಂಗಾವತಿ, ಚಿತ್ರದುರ್ಗ, ರಾಯದುರ್ಗ ಮತ್ತು ರಾಯಚೂರು ತಲಾ ಒಬ್ಬರು ಸಾವನ್ನಪ್ಪಿದ್ದಾರೆ. 426 ಜಿಂದಾಲ್ ಸೊಂಕಿತರಿದ್ದಾರೆ ಎಂದು ವಿವರಿಸಿದರು.
ವೈಯಕ್ತಿಕ ನಿಗಾವಹಿಸಿ ಚಿಕಿತ್ಸೆ ಕೊಡಿಸಿ:
ಜಿಲ್ಲಾಡಳಿತದಿಂದ ಏನೆಲ್ಲಾ ಸಹಕಾರ ಬೇಕೋ ಅದನ್ನು ಒದಗಿಸಲಾಗುವುದು. ಕೊರೊನಾ ಕರ್ತವ್ಯಕ್ಕೆ ಆದೇಶ ಜಾರಿ ಮಾಡಿದವರು ಕೆಲಸ ನಿರ್ವಹಿಸದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು. ವಿಮ್ಸ್ನಲ್ಲಿರುವ 200 ಪಿಜಿ ವಿದ್ಯಾರ್ಥಿಗಳನ್ನು ಕೊರೊನಾ ಚಿಕಿತ್ಸಾ ಕೆಲಸಕ್ಕೆ ಬಳಸಿಕೊಳ್ಳಿ ಎಂದರು.