ಬಳ್ಳಾರಿ: ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಇಲಾಖೆಯ ಸಿಬ್ಬಂದಿಯಿಂದ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಅಗಸನೂರು ಗ್ರಾಮದ ಬಳಿ ಖಾಸಗಿ ಅರಣ್ಯ ಪ್ರದೇಶದಲ್ಲಿದ್ದ ಕೃಷ್ಣಮೃಗ ಬೇಟೆಯಾಡಿದ ಆರೋಪದಡಿ ಓರ್ವ ವ್ಯಕ್ತಿಯನ್ನು ಬಂಧಿಸಿ, ಬಂಧಿತನಿಂದ ಬೇಟೆಯಾಡಿದ ಕೃಷ್ಣಮೃಗವನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ಚಿಕ್ಕಬಳ್ಳಾರಿ ಮೂಲದ ಬಸವ ಎಂಬಾತನನ್ನು ಸಿರುಗುಪ್ಪ ಉಪ ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ, ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪಿ.ರಮೇಶ ಕುಮಾರ ಎದುರು ಹಾಜರುಪಡಿಸಿದ್ದಾರೆ. ಸಿರುಗುಪ್ಪ ತಾಲೂಕಿನ ಅಗಸನೂರು ಬಳಿ ಬುಧವಾರ ನಸುಕಿನ ವೇಳೆ ಸರಿ ಸುಮಾರು 1.30ರವರೆಗೆ ಬಂಧಿತ ಆರೋಪಿ ಬಸವ ಸೇರಿದಂತೆ ಮತ್ತಿಬ್ಬರು ಈ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.
ಉಳಿದ ಇಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪಿ.ರಮೇಶ ಕುಮಾರ ತಿಳಿಸಿದ್ದಾರೆ. ಎಸಿಎಫ್ನವರು ಈ ಪ್ರಕರಣದ ತನಿಖೆಯನ್ನು ಮಾಡಲಿದ್ದಾರೆ. ಷೆಡ್ಯೂಲ್ ಒನ್ ಕೆಟಗರಿಯಲ್ಲಿ ಈ ಕೃಷ್ಣಮೃಗ ಬರಲಿದ್ದು, ಅರಣ್ಯ ಪ್ರದೇಶ ಅಥವಾ ಖಾಸಗಿ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಿದ್ರೆ ಏಳು ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಅವಕಾಶ ಕಾನೂನಿನಲ್ಲಿದೆ ಎಂದರು.
ಈ ಮುಂಚೆಯೇ ಇಂತಹ ಎರಡ್ಮೂರು ಘಟನೆಗಳು ಆ ಗ್ರಾಮದ ಸುತ್ತಲೂ ನಡೆದಿರುವ ಕುರಿತು ಮಾಹಿತಿಯಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಲ್ಡ್ ಲೈಫ್ ಪ್ರೊಟೆಕ್ಷನ್ ಷೆಡ್ಯೂಲ್ 1 ರನ್ವಯ 7 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದರು.