ಬಳ್ಳಾರಿ ವ್ಯಕ್ತಿಗೆ ಕೇರಳದ ಯುವಕನ ಕೈಗಳ ಜೋಡಣೆ; ಕಳೆದುಕೊಂಡ ಜಾಗದಲ್ಲಿ ಹೊಸ ಜೀವನ ಆರಂಭ - ಬಳ್ಳಾರಿ ಕೈ ಜೋಡಣೆ ಸುದ್ದಿ
ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದ ವ್ಯಕ್ತಿಗೆ ಈಗ ಮತ್ತೊಮ್ಮೆ ಜೀವ ಬಂದಂತಾಗಿದೆ. ಬಳ್ಳಾರಿ ವ್ಯಕ್ತಿಗೆ ಕೇರಳದ ಯುವಕನೊಬ್ಬ ತನ್ನ ಕೈಗಳನ್ನು ದಾನ ಮಾಡಿ ಇಹಲೋಕ ತ್ಯಜಿಸಿದ್ದಾನೆ.

ಕೊಚ್ಚಿ/ಬಳ್ಳಾರಿ: ಹೈಟೆನ್ಷನ್ ತಂತಿಗಳಿಂದಾಗಿ ತನ್ನೆರಡು ಕೈಗಳನ್ನು ಕಳೆದುಕೊಂಡಿದ್ದ ಬಳ್ಳಾರಿಯ ವ್ಯಕ್ತಿಗೆ ಕೇರಳದ ಯುವಕನೊಬ್ಬ ತನ್ನ ಕೈಗಳನ್ನು ದಾನ ಮಾಡಿ ಸಾವನ್ನಪ್ಪಿದ್ದಾನೆ.
2011ರಲ್ಲಿ ಬಳ್ಳಾರಿ ನಿವಾಸಿ 34 ವರ್ಷದ ಬಸವಣ್ಣಗೌಡ ಎಂಬವರಿಗೆ ಹೈಟೆನ್ಷನ್ ತಂತಿ ತಗುಲಿದ್ದರಿಂದ ಎರಡೂ ಕೈಗಳು ಸುಟ್ಟಿದ್ದವು. ಕೂಡಲೇ ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಮೊಣಕೈವರೆಗೆ ಕೈಗಳನ್ನು ಕತ್ತರಿಸಿದ್ದರು. ಆಗಿನಿಂದಲೂ ಬಸವಣ್ಣಗೌಡ ಕೈಇಲ್ಲದೇ ಜೀವನ ಸಾಗಿಸುತ್ತಿದ್ದರು.
ಇದನ್ನೂ ಓದಿ: ಹಾಲಿವುಡ್ ಮೂಲಕ ಬೆಳ್ಳಿತೆರೆಗೆ ದೇಶಿ ಸೂಪರ್ ಹೀರೋ ಶಕ್ತಿಮಾನ್!
ಕೈಗಳ ಜೋಡಣೆಗೆ ಮನವಿ: 2016ರಲ್ಲಿ ಕೇರಳದ ಕೊಚ್ಚಿಯಲ್ಲಿರುವ ಅಮೃತ ಆಸ್ಪತ್ರೆಯ ಹ್ಯಾಂಡ್ ಟ್ರಾನ್ಸ್ಪ್ಲಾಂಟೇಷನ್ ಯೂನಿಟ್ಗೆ ಬಸವಣ್ಣಗೌಡ ಮನವಿ ಸಲ್ಲಿಸಿದ್ದರು. ಕಳೆದ ವರ್ಷ ಸೆಪ್ಟಂಬರ್ನಲ್ಲಿ ಇದೇ ಆಸ್ಪತ್ರೆಗೆ ಅನಾರೋಗ್ಯದಿಂದ ದಾಖಲಾಗಿದ್ದ 25 ವರ್ಷದ ಕೊಟ್ಟಾಯಂ ನಿವಾಸಿಯ ಯುವಕನ ಮೆದುಳು ನಿಷ್ಕ್ರಿಯಗೊಂಡಿತ್ತು. ಸೆಪ್ಟಂಬರ್ 24ರಂದು ಯುವಕ ಸಾವನ್ನಪ್ಪಿದ್ದು, ಪೋಷಕರು ಮಗನ ಅಂಗಾಂಗಗಳನ್ನು ದಾನ ಮಾಡಿದ್ದರು.
ಕೈಗಳ ಜೋಡಣೆ ಕಾರ್ಯ: ಆ ಯುವಕನ ಬ್ಲಡ್ ಗ್ರೂಪ್ ಬಸವಣ್ಣನ ಬ್ಲಡ್ ಗ್ರೂಪ್ಗೆ ಮ್ಯಾಚ್ ಆದ ಹಿನ್ನೆಲೆಯಲ್ಲಿ ಸೆಪ್ಟಂಬರ್ 25ರಂದು ಶಸ್ತ್ರಚಿಕಿತ್ಸೆ ನಡೀತು. ಫ್ರಾನ್ಸ್ ಟೆಕ್ನಾಲಜಿ ಮೂಲಕ ಸುಮಾರು 14 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಬಸವಣ್ಣನಿಗೆ ಆ ಯುವಕನ ಕೈಗಳನ್ನು ಜೋಡಿಸಿದ್ದರು. ಈ ವೇಳೆ ಕೈಗಳಿಗೆ ಸ್ನಾಯುಗಳು ಮತ್ತು ಮೂಳೆಗಳನ್ನು ಸರಿಯಾಗಿ ಜೋಡಿಸುವುದು ವೈದ್ಯರಿಗೆ ಸವಾಲಿನ ಸಂಗತಿಯಾಗಿತ್ತು.
ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿ ಮನೆಗೆ 'ಮಹಾ' ಕೈ ಶಾಸಕ ಭೇಟಿ: ಘೋಷಣೆ ಕೂಗಿದ್ದಕ್ಕೆ ಐಫೋನ್, ಸ್ಮಾರ್ಟ್ವಾಚ್ ಗಿಫ್ಟ್!
ಹೊಸ ಕೈಗಳಿಗೆ ರಕ್ತ ಪೂರೈಕೆಯನ್ನು ತಕ್ಷಣವೇ ಪುನಃಸ್ಥಾಪಿಸಲಾಯಿತು ಮತ್ತು ಅವು ಕಾರ್ಯನಿರ್ವಹಿಸಲು ಪ್ರಾರಂಭಿಸಿದವು ಎಂದು ವೈದ್ಯರು ಹೇಳಿದರು. ಪ್ರಸ್ತುತ ಫಿಸಿಯೋಥೆರಪಿಗೆ ಒಳಗಾಗಿರುವ ಬಸವಣ್ಣನಿಗೆ ಹೊಸ ಕೈಗಳಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಬಸವಣ್ಣ ತನಗೆ ಕೈಗಳನ್ನು ನೀಡಿದ ಯುವಕ ಫೋಟೋ ಹಿಡಿದು ಧನ್ಯವಾದ ಅರ್ಪಿಸಿದ್ದಾರೆ.