ಬಳ್ಳಾರಿ: ಜಿಲ್ಲಾ ವಿಭಜನೆ ಖಂಡಿಸಿ ದಿನಕ್ಕೆ ಒಂದರಂತೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನಿರ್ಧರಿಸಿದೆ.
ಅದರ ದ್ಯೋತಕವಾಗಿ ಈ ದಿನ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡರ ಬಣ) ಜಿಲ್ಲಾ ಘಟಕದಿಂದ ಈ ಅಖಂಡ ಬಳ್ಳಾರಿ ಜಿಲ್ಲಾ ವಿಭಜನೆಯನ್ನು ವಿರೋಧಿಸಿ ನಗರದ ಡಿಸಿ ಕಚೇರಿ ಎದುರು ಬೆಳಗ್ಗೆಯಿಂದ ಸಂಜೆಯವರೆಗೂ ಕೂಡ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸೋ ಮುಖೇನ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ನಿತ್ಯವೂ ಒಂದೊಂದು ಸಂಘಟನೆಗಳ ನೇತೃತ್ವದಲ್ಲಿ ಈ ಪ್ರತಿಭಟನೆಯನ್ನು ಕೈಗೊಂಡು ರಾಜ್ಯ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾರವನ್ನು ಎತ್ತಿ ತೋರಿಸುವುದೇ ಇದರ ಉದ್ದೇಶ ಎಂದು ಪ್ರತಿಭಟನಾಕಾರರು ಹೇಳಿದರು.
ಓದಿ: ಕೋಡಿಹಳ್ಳಿ ಚಂದ್ರಶೇಖರ್ಗೆ ಲಿಖಿತ ಭರವಸೆ ಪತ್ರ ಹಸ್ತಾಂತರಿಸಿದ ನಂದೀಶ್ ರೆಡ್ಡಿ
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಹಿರಿಯ ಹೋರಾಟಗಾರ ಸಿರಿಗೇರಿ ಪನ್ನರಾಜ ಅವರು, ಮೊದಲನೇ ಹಂತದಲ್ಲಿ ನಾನಾ ಹೋರಾಟಗಳನ್ನು ಕೈಗೆತ್ತಿಕೊಂಡು ರಾಜ್ಯ ಸರ್ಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನ ಆಗಲಿಲ್ಲ. ಹೀಗಾಗಿ ಎರಡನೇ ಹಂತದ ಪ್ರತಿಭಟನೆಗೆ ಮುಂದಾಗಿದ್ದೇವೆ. ಇದು ಅನಿರ್ದಿಷ್ಟಾವಧಿ ಪ್ರತಿಭಟನೆ ಆಗಿದೆ ಎಂದರು.
ಇನ್ನು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಚಾನಾಳ್ ಶೇಖರ ಅವರು ಮಾತನಾಡಿ, ನಾವೇನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆಯೋ ಅಥವಾ ಇನ್ಯಾವುದೋ ವ್ಯವಸ್ಥೆಯಲ್ಲಿ ಇದ್ದೇವಾ ಎಂಬ ಅನುಮಾನ ನಮಗೆ ಮೂಡಿದೆ. ಈ ಪ್ರತಿಭಟನೆಯನ್ನು ಹತ್ತಿಕ್ಕುವ ಕಾರ್ಯಕ್ಕೆ ಜಿಲ್ಲೆಯ ಪೊಲೀಸರು ಮುಂದಾಗಿದ್ದಾರೆ ಎಂದು ದೂರಿದರು.