ಬಳ್ಳಾರಿ: ನಗರದ ವಿವಿಧ ಪಾದಚಾರಿ ರಸ್ತೆ ಹಾಗೂ ಸಾರ್ವಜನಿಕ ಪ್ರದೇಶ ವ್ಯಾಪ್ತಿಗೆ ಒಳಪಡುವ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಮಹಾನಗರ ಪಾಲಿಕೆ ಆರಂಭಿಸಿದ್ದು, ಇದುವರೆಗೆ 15 ಅನಧಿಕೃತ ಧಾರ್ಮಿಕ ಕಟ್ಟಗಳನ್ನು ತೆರವುಗೊಳಿಸಲಾಗಿದೆ.
ಸುಪ್ರೀಂಕೋರ್ಟ್ ಆದೇಶದನ್ವಯ ನಗರದಲ್ಲಿ ಅನಧೀಕೃತವಾಗಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದ್ದು, ಪಾಲಿಕೆಯ ಅಧಿಕಾರಿಗಳು ಪಾಲಿಕೆ ವ್ಯಾಪ್ತಿಗೊಳಪಡುವ ಪ್ರದೇಶಗಳನ್ನು ಸಮೀಕ್ಷೆ ಮಾಡಿ ಒಟ್ಟು 146 ಅನಧೀಕೃತ ಧಾರ್ಮಿಕ ಕಟ್ಟಡಗಳಿರುವುದೆಂದು ವರದಿ ನೀಡಿದ್ದಾರೆ. ಅದರಂತೆ ಪಾಲಿಕೆಯ ಕಂದಾಯ ಇಲಾಖೆಯ ಸಿಬ್ಬಂದಿ, ಇಂಜಿನಿಯರ್ ಸಿಬ್ಬಂದಿ ಹಾಗೂ ಪೊಲೀಸರ ಸಮಕ್ಷಮದಲ್ಲಿ 15 ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವುಗೊಳಿಸಲಾಗಿದೆ ಎಂದು ಆಯುಕ್ತೆ ತುಷಾರಮಣಿ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣ, ಮಿಲ್ಲರ್ ಪೇಟೆ,ರೈಲ್ವೆ ನಿಲ್ದಾಣ, ಮೀನಾಕ್ಷಿ ಸರ್ಕಲ್, ಕೆ.ಸಿ ರಸ್ತೆ, ಮಡ್ಡರಬಂಡೆ ಸ್ಥಳಗಳಲ್ಲಿ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಿದರು.ಮುಂದಿನ ದಿನಗಳಲ್ಲಿ 2 ತಂಡವನ್ನೊಳಗೊಂಡ ಪಾಲಿಕೆ ಸಿಬ್ಬಂದಿಯನ್ನು ನಿಯೋಜಿಸಿ ತೆರವು ಕಾರ್ಯಾಚರಣೆಯನ್ನು ಪೂರ್ಣಗೊಳಿಸಲಾಗುವುದೆಂದು ತಿಳಿಸಿದರು.