ಬೆಳಗಾವಿ: ಕಾಂಗ್ರೆಸ್ ಪಕ್ಷದ ನಾಯಕರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಆರೋಪದಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಮಹಾಮಾರಿ ಕಾಲದಲ್ಲಿ ಜನತೆಗೆ ಧೈರ್ಯ ತುಂಬಬೇಕು ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿದರು.
ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕೊರೊನಾ ಮಹಾಮಾರಿ ಇಡೀ ಜಗತ್ತಿನಲ್ಲಿ ಹರಡಿದೆ. ಆದ್ರೆ, ದೇಶದಲ್ಲಿ ಕೊರೊನಾ ತಡೆಯಲು ಸರ್ಕಾರದಿಂದ ಎಲ್ಲ ಅಗತ್ಯವಾದ ಕೆಲಸಗಳನ್ನು ಮಾಡಲಾಗಿದೆ. ಇಡೀ ದೇಶದಲ್ಲಿ ಯಾರೂ ಟೀಕೆ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮಾಡಲು ಬೇರೆ ಕೆಲಸವಿಲ್ಲ ಹೀಗಾಗಿ ಅವರು ಆರೋಪಿಸುತ್ತಿದ್ದಾರೆ. ಅದನ್ನು ಬಿಟ್ಟು ಸಿದ್ದರಾಮಯ್ಯ ಹಾಗೂ ಎಚ್.ಕೆ. ಪಾಟೀಲರು ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಸರಿಯಾಗಿ ಮಾರ್ಗದರ್ಶನ ಮಾಡಬೇಕು. ಇದು ಟೀಕೆ ಮಾಡುವ ಸಮಯವಲ್ಲ. ಜನರಿಗೆ ಧೈರ್ಯ ತುಂಬವ ಕೆಲಸವನ್ನು ಮಾಡಬೇಕು ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ಮನವಿ ಮಾಡಿಕೊಂಡರು.
ಇನ್ನು ಬಾಗಲಕೋಟೆ-ಕುಡಚಿ ರೈಲ್ವೆ ಯೋಜನೆಗೆ ಅಗತ್ಯ ಭೂ ಸ್ವಾಧೀನಕ್ಕೆ ಸಂಬಂಧಪಟ್ಟ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳು ಒಪ್ಪಿಗೆ ನೀಡಿದ್ದಾರೆ. ಕೂಡಲೇ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮ ಜರುಗಿಸಲಾಗಿದೆ. ಈ ಯೋಜನೆಯಿಂದ ಶುಗರ್, ಸಿಮೆಂಟ್, ಲೈಮ್ ಸ್ಟೋನ್, ಅಗ್ರಿಕಲ್ಚರ್, ಮಲ್ಟಿ ಕಲ್ಚರ್ ರೈತರಿಗೆ ಅನುಕೂಲಕರವಾಗುವುದರ ಜೊತೆಗೆ ಕಮರ್ಷಿಯಲ್ ಆಗುತ್ತಿದೆ. ಹೀಗಾಗಿ ಈ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರಿಗೆ ಸಾಕಷ್ಟು ಉದ್ಯೋಗ ಅವಕಾಶಗಳನ್ನು ನೀಡಲಿದೆ. ಈಗಾಗಲೇ ಖಜ್ಜಿಡೋಣಿಯಿಂದ ಲೋಕಾಪುರವರೆಗೆ 10 ಕಿಮೀವರೆಗೆ ತಕ್ಷಣ ಕಾಮಗಾರಿ ಆರಂಭಿಸಲು ತಿಳಿಸಲಾಗಿದೆ. ಉಳಿದ ಕಡೆ ಲ್ಯಾಂಡ್ ಸಮಸ್ಯೆ ಬಗೆ ಹರಿಸಿಕೊಂಡು ಕಾಮಗಾರಿ ಆರಂಭಿಸಲಾಗುವುದು ಎಂದರು.