ಬೆಳಗಾವಿ: ಜವಾಬ್ದಾರಿಯುತ ಸ್ಥಾನದಲ್ಲಿರುವ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರೇ ರಾಜಾರೋಷವಾಗಿ ಸಂಚಾರ ನಿಯಮ ಉಲ್ಲಂಘಿಸಿದ ಘಟನೆ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.
ಇಲ್ಲಿನ ಡಿಸಿ ಕಚೇರಿಯಿಂದ ಕ್ಲಬ್ ರೋಡ್ ಕಡೆಗೆ ಹೊರಟಿದ್ದ ಸಚಿವರಿದ್ದ ಕಾರು ರೆಡ್ ಸಿಗ್ನಲ್ ಬಿದ್ದಿದ್ದರೂ ಅದನ್ನು ಲೆಕ್ಕಿಸದೆ ಸಿಗ್ನಲ್ ಜಂಪ್ ಮಾಡಿತ್ತು. ವಿಪರ್ಯಾಸ ಎಂದರೆ ಸಚಿವರ ಜೊತೆ ಬಂದಿದ್ದ ಎಸ್ಕಾರ್ಟ್ ಜೀಪ್ ಕೂಡ ಸಿಗ್ನಲ್ ಜಂಪ್ ಮಾಡಿ ನಿಯಮ ಉಲ್ಲಂಘಿಸಿದೆ. ಸಚಿವರು ಸಂಚಾರ ನಿಯಮ ಉಲ್ಲಂಘಿಸಿದರೂ ಸಹ ಕರ್ತವ್ಯದಲ್ಲಿದ್ದ ಪೊಲೀಸರು ಯಾವುದೇ ಕ್ರಮ ಜರುಗಿಸದೇ ಇರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಚೆನ್ನಮ್ಮ ವೃತ್ತದಲ್ಲಿ ನಾಲ್ಕು ಸಿಸಿ ಕ್ಯಾಮರಾಗಳಿದ್ದು, ಸಂಚಾರ ನಿಯಮ ಉಲ್ಲಂಘಿಸುವ ಸಾರ್ವಜನಿಕರ ಮನೆಗೆ ನೋಟಿಸ್ ಕಳುಹಿಸುತ್ತಾರೆ. ಸಚಿವರಿಗೂ ಇದೇ ನಿಯಮ ಅನ್ವಯ ಆಗುತ್ತಾ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಪರಿಶೀಲನೆಗೆ ಸಚಿವರು ನಗರಕ್ಕೆ ಆಗಮಿಸಿದ್ದರು. ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ತೆರಳುವ ವೇಳೆ ಸಚಿವರ ವಾಹನ ಸಿಗ್ನಲ್ ಜಂಪ್ ಮಾಡಿದೆ.