ಬೆಳಗಾವಿ: ತಾಲೂಕಿನ ಆನಗೋಳದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅನಗೋಳದ ಕನಕದಾಸ ಕಾಲೋನಿಯಲ್ಲಿ ಡಿ.18ರಂದು ಸಂಗೊಳ್ಳಿ ರಾಯಣ್ಣ ಪ್ರತಿಮೆ ಬೀಳಿಸಿ ಖಡ್ಗ, ಗುರಾಣಿ ಬೇರ್ಪಡಿಸಿ ಕೆಲವರು ವಿಕೃತಿ ಮೆರೆದಿದ್ದರು.
ಕಲ್ಲು ತೂರಾಟ ನಡೆಸಿದವರೇ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ರಾಯಣ್ಣ ಮೂರ್ತಿ ಹಾನಿ ಮಾಡಿದ್ದರು. ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಂದು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದು, ತನಿಖೆ ಪ್ರಗತಿಯಲ್ಲಿದೆ.
ಈ ಹಿಂದೆ ಕಲ್ಲು ತೂರಾಟ ಹಾಗೂ ಪ್ರತಿಮೆ ಧ್ವಂಸ ಪ್ರಕರಣ ಸಂಬಂಧ ಪೊಲೀಸರು ಎಂಇಎಸ್ ಮುಖಂಡ ಮತ್ತು ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ಸೇರಿ 27 ಜನರನ್ನು ಬಂಧಿಸಿ ಜೈಲಿಗಟ್ಟಿದ್ದರು. ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅನಗೋಳದ ಕನಕದಾಸ ಕಾಲೋನಿಯಲ್ಲಿ ಭಾನುವಾರ ರಾಯಣ್ಣನ ಹೊಸ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಮೂರ್ತಿ ಭಗ್ನಗೊಂಡ ಜಾಗದಲ್ಲಿಯೇ ಈ ಹೊಸ ಪುತ್ಥಳಿ ಪ್ರತಿಷ್ಠಾಪಿಸಿ ಕ್ಷೀರಾಭಿಷೇಕದೊಂದಿಗೆ ಪೂಜೆ ಸಲ್ಲಿಸಲಾಗಿದೆ.
ಕಿತ್ತೂರು ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ:
ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿದ ಆರೋಪಿಗಳನ್ನು ಬಂಧಿಸಿದ ಹಿನ್ನೆಲೆಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಸೇರಿದಂತೆ ಕಾರ್ಯಕರ್ತರು ಕಿತ್ತೂರು ಪಟ್ಟಣದಲ್ಲಿರುವ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂಭ್ರಮಿಸಿದರು. ಬೆಳಗಾವಿಗೆ ಹೋಗುವ ಮಾರ್ಗದಲ್ಲಿರುವ ಚೆನ್ನಮ್ಮ ಪುತ್ಥಳಿಗೆ ತೆರಳಿ ಮಾಲಾರ್ಪಣೆ ಮಾಡಿದ ಕಾರ್ಯಕರ್ತರು ಎಂಇಎಸ್ ವಿರುದ್ಧ ಧಿಕ್ಕಾರ ಕೂಗಿದರು.
ಇದನ್ನೂ ಓದಿ: ರಮಾಕಾಂತ್ ಕೊಂಡೂಸ್ಕರ್, ಶುಭಂ ಶೆಳ್ಕೆ ಸೇರಿ 27 ಜನರು ಹಿಂಡಲಗಾ ಜೈಲಿಗೆ.. ಬೆಳಗಾವಿಯಲ್ಲಿ ನಿಷೇಧಾಜ್ಞೆ