ಬೆಳಗಾವಿ : ಹಿರೇಬಾಗೇವಾಡಿಯಲ್ಲಿ ಕೊರೊನಾ ಸೋಂಕಿತರು ಬಹುತೇಕ ಗುಣಮುಖರಾಗಿರುವುದರಿಂದ ಶೀಘ್ರವೇ ಹಿರೇಬಾಗೆವಾಡಿ ಗ್ರಾಮವನ್ನ ಡಿನೋಟಿಫೈ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕುಡಚಿಯಲ್ಲಿ ಪತ್ತೆಯಾಗಿದ್ದ ಎಲ್ಲ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಸಾರ್ಜ್ ಆಗಿರುವ ಹಿನ್ನೆಲೆಯಲ್ಲಿ ಪಟ್ಟಣವನ್ನು ಈಗಾಗಲೇ ಡಿನೋಟಿಫೈ ಮಾಡಲಾಗಿದೆ. ಅದರಂತೆ ಹಿರೇಬಾಗೇವಾಡಿಯಲ್ಲಿ ಪತ್ತೆಯಾಗಿದ್ದ 49 ಪ್ರಕರಣಗಳ ಪೈಕಿ ಬಹುತೇಕರು ಗುಣಮುಖರಾಗಿದ್ದು, ಇನ್ನು ಕೆಲವರು ಮಾತ್ರ ಉಳಿದುಕೊಂಡಿದ್ದಾರೆ. ಉಳಿದಿರುವವರಲ್ಲಿ ಹೆಚ್ಚಿನವರು ಹೊರಗಿನಿಂದ ಬಂದವರಿದ್ದು, ಅವರನ್ನು ಮೊದಲಿನಿಂದಲೇ ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಹಿರೇಬಾಗೇವಾಡಿಯಲ್ಲಿ ಈಗ ಯಾರೂ ಸ್ಥಳೀಯ ಸೋಂಕಿತರಿಲ್ಲದ ಕಾರಣ ಅತೀ ಶೀಘ್ರವೇ ಹಿರೇಬಾಗೇವಾಡಿ ಗ್ರಾಮವನ್ನೂ ಕೂಡ ಡಿನೋಟಿಫೈ ಮಾಡಿ ಆದೇಶ ಹೊರಡಿಸಲಾಗುವುದು. ಈ ಕುರಿತು ಜಿಲ್ಲಾಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
ಕುಡಚಿ ಮತ್ತು ಹಿರೇಬಾಗೇವಾಡಿಯಲ್ಲಿ ಅತಿಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಈ ಎರಡೂ ಪ್ರದೇಶಗಳಿಂದ ಸೋಂಕು ಬೇರೆಡೆ ಹರಡುವ ಸಾಧ್ಯತೆ ಇತ್ತು. ಆದರೆ, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಹಾಗೂ ಇತರ ಕೊರೊನಾ ವಾರಿಯರ್ಸ್ಗಳ ಪ್ರಯತ್ನದಿಂದ ಹತೋಟಿಗೆ ಬಂದಿದ್ದು, ಅವರೆಲ್ಲರೂ ಅಭಿನಂದನೆಗೆ ಅರ್ಹರಾಗಿದ್ದಾರೆ ಎಂದು ಜಗದೀಶ ಶೆಟ್ಟರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ಮಹಾರಾಷ್ಟ್ರದಿಂದ ಇದುವರೆಗೂ 5,952 ಮಂದಿ ರಾಜ್ಯಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದಿದ್ದಾರೆ. ಇಲ್ಲಿವರೆಗೂ ಜಿಲ್ಲೆಯಲ್ಲಿ 143 ಸಕ್ರಿಯ ಕೇಸ್ಗಳಿವೆ. ಅದರಲ್ಲಿ 93 ಜನರು ಗುಣಮುಖರಾಗಿದ್ದಾರೆ. 46 ಪಾಸಿಟಿವ್ ಕೇಸ್ಗಳಿವೆ. ಅವುಗಳು ಈ ವಾರದಲ್ಲಿಯೇ ಡಿಸ್ಚಾರ್ಜ್ ಆಗುವ ಹಂತಕ್ಕೆ ಬರಲಿದ್ದಾರೆ ಎಂದರು.
ಇನ್ನು ಮಹಾರಾಷ್ಟದಿಂದ ಬಂದಿರುವವರೆಲ್ಲ ನಿಪ್ಪಾಣಿಯ ಕೊಗನೊಳ್ಳಿ ಚೆಕ್ ಪೋಸ್ಟ್ ಮೂಲಕವೇ ಹಾದು ಹೋಗಿದ್ದರು. ಅಧಿಕಾರಿಗಳು ಸೂಕ್ತಕ್ರಮ ಕೈಗೊಂಡಿದ್ದರ ಪರಿಣಾಮ ಸಮುದಾಯಕ್ಕೆ ಹರಡುವುದನ್ನು ತಪ್ಪಿಸಿದ ಜಿಲ್ಲೆಯ ಅಧಿಕಾರಿಗಳ ಕಾರ್ಯಕ್ಕೆ ಜಗದೀಶ ಶೆಟ್ಟರ್ ಪ್ರಶಂಸೆ ವ್ಯಕ್ತಪಡಿಸಿದರು.
ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ, ವಿಧಾನ ಪರಿಷತ್ ಸದಸ್ಯ ಪ್ರಭಾಕರ ಕೋರೆ, ಶಾಸಕರಾದ ಅಭಯ್ ಪಾಟೀಲ್, ಅನಿಲ ಬೆನಕೆ ಹಾಗೂ ಮಾಜಿ ಶಾಸಕ ಜಗದೀಶ್ ಮೆಟ್ಟಗುಡ್ಡ ಉಪಸ್ಥಿತರಿದ್ದರು.